
ಕಲಬುರಗಿ: ಎ.9:ವ್ಯಾಪಾರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ ಆಡಳಿತ ಮಾಡಿ ದೇಶವನ್ನು ದಾಸ್ಯಕ್ಕೀಡು ಮಾಡಿದರು. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೈನಿಕರಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಹೋರಾಟ ಮಾಡಿ ಹುತಾತ್ಮರಾದ ಮಂಗಲಪಾಂಡೆ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ 'ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜರುಗಿದ 'ಮಂಗಲಪಾಂಡೆ ಸ್ಮರಣೋತ್ಸವÉ'ದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಕಾಡೆಮಿಯ ತರಬೇತಿದಾರ ದತ್ತು ಹಡಪದ ಮಾತನಾಡಿ, ಮಂಗಲಪಾಂಡೆ ಅವರು ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಅವರಲ್ಲಿರುವ ಅಪ್ಪಟ ದೇಶಭಕ್ತಿ ಇಂದಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಅವರ ಬಗ್ಗೆ ತಿಳಿದುಕೊಂಡು ದೇಶಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಸತೀಸ್ ಟಿ.ಸಣಮನಿ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳಿದ್ದರು.