ದೇಶದ ಸ್ವಾತಂತ್ರ್ಯಕ್ಕೆ ಜನಪದರ ಕೊಡುಗೆ ಅಪಾರ

ಕಲಬುರಗಿ,ಅ.15: ನಮ್ಮ ದೇಶದ ಸ್ವಾತಂತ್ರಕ್ಕಾಗಿ ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನು ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಈಗಿನ ರೀತಿಯಲ್ಲಿ ಮಾಧ್ಯಮಗಳಿಲ್ಲದ ಸಂದರ್ಭದಲ್ಲಿ ಜಾನಪದ ಕಲಾವಿದರು ಗೀಗಿ, ಲಾವಣಿ, ಮೋಹರಂ ಪದಗಳು ಮತ್ತು ಬೀದಿ ನಾಟಕಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜನಜಾಗೃತಿಯನ್ನು ಉಂಟುಮಾಡುವ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಲು ಜನಪದರ ಕೊಡುಗೆ ಅಪಾರವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ಸಮೀಪದ ಝಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ದೇಶದ ಸ್ವಾತಂತ್ರ್ಯಕ್ಕೆ ಜನಪದರ ಕೊಡುಗೆ’ ಎಂಬ ವಿಶೇಷ ಉಪನ್ಯಾಸ ಹಾಗೂ ಜಾನಪದ ಕಲಾವಿದರಿಗೆ ಸತ್ಕಾರ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪರಿಷತ್‍ನ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡುತ್ತಾ, ಗಾಂಧೀಜಿ, ಶಾಸ್ತ್ರೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರ ಚಿಂತನೆ ಕುರಿತು ಜನಪದರ ರಚಿಸಿ ಹಾಡಿದ ಗೀತೆಗಳು ಬಹಳ ಪರಿಣಾಮಕಾರಿಯಾದವು. ಅದು ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಯಿತು. ಜನಪದ ಸಾಹಿತ್ಯದ ವ್ಯಾಪ್ತಿ ವಿಶಾಲವಾದದ್ದು. ಅದರಲ್ಲಿ ಸಂಸ್ಕøತಿ, ಮೌಲ್ಯಗಳು, ಬದುಕುವ ಕಲೆ, ದೇಶದ ಪರಂಪರೆ, ಗ್ರಾಮೀಣ ಸೊಗಡು ಸೇರಿದಂತೆ ಅನೇಕ ಅಂಶಗಳು ಅಡಗಿವೆ. ಜನಪದರು ಅನಕ್ಷರಸ್ಥರಿದ್ದರೂ ಕೂಡಾ ಅವರು ರಚಿಸಿದ ಸಾಹಿತ್ಯದ ವ್ಯಾಖ್ಯಾನ ವಿದ್ವಾಂಸರಿಗೆ ನಿಲಕದಿರುವುದು ಅದರ ಶಕ್ತಿಯನ್ನು ತೋರಿಸುತ್ತದೆ ಎಂದು ನುಡಿದರು.
ಜಾನಪದ ಕಲಾವಿದರಾದ ಸುರೇಶ ಮಾಂಗ, ಹಣಮಂತ ಪೂಜಾರಿ, ಭೀಮರಾಯ ನಾಯ್ಕೋಡಿ, ಲಕ್ಷ್ಮಣ ಕಟ್ಟಿಮನಿ, ಸಾಯಬಣ್ಣ ಹೊಸಮನಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಕಲಾ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಗ್ರಾ.ಪಂ, ಸದಸ್ಯ ಪೀರಪ್ಪ ದೊಡ್ಡಮನಿ, ಗ್ರಾಮದ ಪ್ರಮುಖರಾದ ರಾಜಶೇಖರ ಪಾಟೀಲ, ಶರಣಪ್ಪ ಪುಜಾರಿ, ಉಮೇಶ ದೊಡ್ಡಮನಿ, ಬಸವರಾಜ ನಾಯ್ಕೋಡಿ, ಪರಶುರಾಮ ದೊಡ್ಡಮನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.