
(ಸಂಜೆವಾಣಿ ವಾರ್ತೆ)
ಇಂಡಿ:ಆ.25:ದೇಶದ ಜನರು ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸಲು ನಮ್ಮ ದೇಶದ ಸೈನಿಕರು ಕಾರಣ.ದೇಶದ ಭದ್ರತೆಗಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಈ ಅಭಿಯಾನ ನಡೆಸಲಾಗುತ್ತಿದ್ದು, ಪ್ರತಿಯೊಬ್ಬ ಭಾರತೀಯರು ಈ ಅಭಿಯಾನದಲ್ಲಿ ಭಾಗವಹಿಸಿ ಯೋಧರನ್ನು ಗೌರವಿಸೋಣ ಎಂದು ಸ್ಕೌಟ್ ಮಾಸ್ಟರ್ ಸಂತೋಷ ಬಂಡೆ ಹೇಳಿದರು.
ಅವರು ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಜಿ ಆರ್ ಜಿ ಗಾಂಧಿ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇಂಡಿ ವತಿಯಿಂದ “ಮೇರಿ ದೇಶ,ಮೇರಿ ಮಿಟ್ಟಿ ಅಮೃತ ಕಳಶ” ಅಭಿಯಾನವನ್ನು ಉದ್ಧೇಶಿಸಿ ಮಾತನಾಡಿದರು.
ಜಿ ಆರ್ ಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಯಪ್ರಸಾದ ಡಿ ಮಾತನಾಡಿ, ಸ್ವಾತಂತ್ರ್ಯ ಆಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರರನ್ನು ಗೌರವಿಸುವ ಉದ್ದೇಶದಿಂದ ಪ್ರಧಾನಿಯವರ ಆಶಯದಂತೆ ನಡೆಯುತ್ತಿರುವ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಯಶಸ್ವಿಗೊಳಿಸೋಣ
ಎಂದು ಹೇಳಿದರು.
ತಾಲೂಕ ಕಾರ್ಯದರ್ಶಿ ಷಹಾಜಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ,ದೇಶದ ಮೂಲೆ ಮೂಲೆಗಳಿಂದಲೂ ಮಣ್ಣು ಸಂಗ್ರಹಿಸಿ, ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲೇ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು “ಅಮೃತ್ ಉದ್ಯಾನ’ ನಿರ್ಮಿಸಲಾಗುವುದು. ಈ ಉದ್ಯಾನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ ಮಾಸ್ಟರ್ ಗಳಾದ ಶ್ರೀಕಾಂತ ರಾಠೋಡ, ದತ್ತಾತ್ರೇಯ ಕೊಳಾರಿ, ವೈ ಎಂ ಬಾಗೇವಾಡಿ, ಗೈಡ್ ಕ್ಯಾಪ್ಟನ್ ಸುಮಂಗಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ತಾಲೂಕ ಖಜಾಂಚಿ ಬಸವರಾಜ ಗೋರನಾಳ ಕಾರ್ಯಕ್ರಮ ನಿರ್ವಹಿಸಿದರು.