ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಅನುಮಾನ -ಸಲೀಂ ಅಹ್ಮದ್

ಕೋಲಾರ,ಏ,೧-ರಾಹುಲ್ ಗಾಂಧಿ ನೇತೃತ್ವದಲ್ಲಿ ಕೋಲಾರದಲ್ಲಿ ಏ.೫ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾಂಗ್ರೇಸ್ ಪಕ್ಷದ ಬೃಹತ್ ಸಮಾವೇಶದ ಕಾರ್ಯಕ್ರಮ ೯ಕ್ಕೆ ನಿಗದಿಪಡಿಸಲಾಗಿದೆ. ಇನ್ನುಳಿದ ವಿಚಾರಗಳ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ನಗರ ಹೊರವಲಯದ ಕಾಂಗ್ರೇಸ್ ಸಮಾವೇಶದ ಜಾಗವನ್ನು ಪರಿಶೀಲಿಸಲು ಅಗಮಿಸಿದ್ದ ಅವರು ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂಬ ಅನುಮಾನ ಉಂಟಾಗುತ್ತಿದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದ ಪ್ರಧಾನಿ ಈಗ ರಾವಣ ರಾಜ್ಯ ಮಾಡಿದ್ದಾರೆ. ಸ್ವರ್ಗ ತೋರಿಸುವುದಾಗಿ ಹೇಳಿ ನರಕ ತೋರಿಸುತ್ತಿದ್ದಾರೆ ಎಂದು ಸಲೀಂ ವಾಗ್ದಾಳಿ ನಡೆಸಿದರು.
ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೇಲೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಮುಖಂಡರು ಯಾವತ್ತೂ ದೂರು ನೀಡಿಲ್ಲ, ರಾಹುಲ್ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ ಎಲ್ಲಿ ಹೋರಾಟ ಆರಂಭವಾಯಿತೋ ಅಲ್ಲಿಂದ ಮತ್ತೆ ಹೋರಾಟ ಆರಂಭಿಸಲು ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ ಕೋಲಾರದಿಂದಲೇ ಸತ್ಯಮೇವ ಜಯತೇ ಸಂದೇಶ ಹೋಗಲಿದೆ ಎಂದು ತಿಳಿಸಿದರು.
ಸಂಸತ್‌ನಲ್ಲಿ ಅದಾನಿ ವಿಚಾರ ಚರ್ಚಿಸಬಾರದೆಂದು ಅವರನ್ನು ಅನರ್ಹ ಮಾಡಲಾಗಿದೆ. ಭಾರತ್ ಜೋಡಿ ಯಾತ್ರೆಗೆ ಸಿಕ್ಕಿದ ಯಶಸ್ಸಿನಿಂದ ಬಿಜೆಪಿಗೆ ಭ್ರಮನಿರಸನವಾಗಿದೆ. ಹೇಗಾದರೂ ರಾಹುಲ್ ಹೋರಾಟಕ್ಕೆ ತಡೆಯೊಡ್ಡಲು ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ ಎಂದು ಹೇಳಿದರು.
ಯಾವ ಘನ ಕಾರ್ಯ ಮಾಡಿದ್ದಾರೆ ಎಂದು ವಿಜಯ ಸಂಕಲ್ಪಯಾತ್ರೆ ನಡೆಸಿದರು, ಶೇ.೪೦ ಕಮೀಷನ್ ಪಡೆದಿರುವುದಕ್ಕಾ ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಸಿದ್ದಕ್ಕಾ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗದಿದ್ದಕ್ಕಾ ಎಂದು ಪ್ರಶ್ನಿಸಿದರು.
ಬದ್ಧತೆ ಇಲ್ಲದ ಕೆಟ್ಟ, ಭ್ರಷ್ಟ ಸರ್ಕಾರ, ಶೇ.೪೦ ಕಮಿಷನ್ ಸರ್ಕಾರ. ಈ ಬಗ್ಗೆ ಜನರಿಗೆ ತಿಳಿಸುತ್ತೇವೆ
ಪ್ರಧಾನಿ, ಗೃಹ ಸಚಿವರು ರಾಜ್ಯಕ್ಕೆ ನೂರು ಬಾರಿ ಬಂದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ೧೫೦ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ಎಂದು ತಿಳಿಸಿದರು.
ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ನಾಲ್ಕೈದು ದಿನಗಳಲ್ಲಿ ಬಿಡುಗಡೆಯಾಗಲಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಹೆಸರು ಇದೆಯೋ ಇಲ್ಲವೋ ಎಂಬುದಕ್ಕೆ ಕಾದು ನೋಡಿ, ಜಿಲ್ಲೆಯಲ್ಲಿ ಯಾವುದೇ ಬಣ, ತಂಡ ಇಲ್ಲ. ಇರುವುದು ಕಾಂಗ್ರೆಸ್ ಬಣ ಮಾತ್ರ ಎಂದು ನುಡಿದರು.
ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಎಲ್.ಎ ಮಂಜುನಾಥ್ ಇದ್ದರು.