ವಿಜಯಪುರ: ಮೇ.21:ನಗರದ ಹಿರಿಯ ಪತ್ರಕರ್ತ, ಕಾರ್ಯನಿರತ ಪತ್ರಕರ್ತರ ಸಂಘದ ಸಹ ಖಜಾಂಚಿ ದೀಪಕ ಶಿಂತ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘ ಕೊಡಮಾಡುವ “ಪತ್ರಕರ್ತ ರತ್ನ” ಪ್ರಶಸ್ತಿ ಲಭಿಸಿದೆ.
ಕಳೆದ 25 ವರ್ಷಗಳಿಂದ ಪತ್ರಿಕಾ ರಂಗದಲ್ಲಿ (1998) ಸಕ್ರೀಯರಾಗಿರುವ ದೀಪಕ ಶಿಂತ್ರೆ ಅವರು ಮಹಾರಾಷ್ಟ್ರದ ಮರಾಠಿ ದಿನಪತ್ರಿಕೆಗಳಾದ “ಸಂಚಾರ”, “ತರುಣ ಭಾರತ”, “ಸ್ವರಾಜ್ಯ” (ಸೊಲಾಪೂರ), “ಲಲಕಾರ”, “ಮಹಾ ಸತ್ತಾ” (ಸಾಂಗಲಿ) ಅಲ್ಲದೇ ಬೆಳಗಾವಿಯಿಂದ ಪ್ರಕಟವಾಗುವ “ಪುಡಾರಿ” ಮತ್ತು “ಸ್ವತಂತ್ರ ಪ್ರಗತಿ” ಮರಾಠಿ ದಿನಪತ್ರಿಕೆಗಳು ಹಾಗೂ “ಕೈಫಿಯತ್” ಕನ್ನಡ ದಿನಪತ್ರಿಕೆಗೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಡಿನ ಗಡಿ ಪ್ರದೇಶಗಳ ಮರಾಠಿ ಪತ್ರಿಕೆಗಳಿಗೆ ವಿಜಯಪುರ ಜಿಲ್ಲೆಯ ಆಗು-ಹೋಗುಗಳನ್ನು ನಿಯಮಿತವಾಗಿ ವರದಿ ಮಾಡುವ ಮೂಲಕ ಕನ್ನಡ – ಮರಾಠಿ ಭಾಷಾ ಬಾಂಧವ್ಯವನ್ನು ವೃದ್ಧಿಸುವ, ಭಾಷಾ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪತ್ರಿಕಾ ರಂಗದಲ್ಲಿ ದೀಪಕ ಶಿಂತ್ರೆ ಅವರ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘವು ದೀಪಕ ಶಿಂತ್ರೆ ಅವರಿಗೆ ಜೂನ್. 04 ರಂದು ಫಂಡರಾಪುರದಲ್ಲಿ “ಪತ್ರಕರ್ತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.