
ಹುಬ್ಬಳ್ಳಿ,ಏ4 : ಎಸ್. ಎಸ್.ಕೆ. ಶ್ರೀ ತುಳಜಾಭವಾನಿ ಕೇಂದ್ರ ಪಂಚ ಸಮಿತಿ ಹಾಗೂ ದಿ. ಎಸ್.ಎಸ್.ಕೆ. ಯುವಕರ ಸಂಘ ಹುಬ್ಬಳ್ಳಿ-ಧಾರವಾಡ ವತಿಯಿಂದ ಶ್ರೀ ಹನುಮಾನ್ ಜಯಂತಿಯ ಪ್ರಯುಕ್ತ ‘ಶ್ರೀ ಹನುಮಾನ್ ಮೂರ್ತಿಯ ಭವ್ಯ ಮೆರವಣಿಗೆ’ಯು ಏಪ್ರಿಲ್ 6 ರಂದು ಸಂಜೆ 4 ಗಂಟೆಗೆ ದಾಜೀಬಾನ್ ಪೇಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ ಬುರಬುರೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆ. 10 ಗಂಟೆಗೆ ಮಹಿಳಾ ಮಂಡಳ ಸದಸ್ಯರಿಂದ ತೊಟ್ಟಿಲೋತ್ಸವ ಕಾರ್ಯಕ್ರಮ ನಂತರ ಸಮಾಜದ ಹಿರಿಯರಿಂದ ಶ್ರೀ ಹನುಮಾನ್ ಮೂರ್ತಿಯ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದರು. ಸಂಜೆ 4 ಗಂಟೆಗೆ ಮೆರವಣಿಗೆಗೆ ಸಮಾಜ ಧರ್ಮದರ್ಶಿ ಸತೀಶ್ ಮೆಹರವಾಡೆ ಅವರು ಚಾಲನೆ ನೀಡಲಿದ್ದಾರೆ.
ಭವ್ಯ ಮೆರವಣಿಗೆಯು ದಾಜೀಬಾನ್ ಪೇಟ್ ಶ್ರೀ ತುಳಜಾಭವಾನಿ ದೇವಸ್ಥಾನದ ಶ್ರೀ ಸಹಸ್ರಾರ್ಜುನ ವೃತ್ತದಿಂದ ಆರಂಭವಾಗಿ ದಾಜೀಬಾನ್ ಪೇಟೆಯ ಮುಖ್ಯ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತವನ್ನು ಸುತ್ತುವರೆದು ಜನತಾ ಬಜಾರದಿಂದ ತಾಡಪತ್ರಿ ಓಣಿ ಹಾಗೂ ಮಹಾವೀರ ಗಲ್ಲಿ ಮುಖಾಂತರ ದಾಜೀಬಾನ್ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ಮುಕ್ತಾಯಗೊಳ್ಳಲಿದೆ ಎಂದರು.
ಮೆರವಣಿಗೆ ನಂತರ ಸಮಾರಂಭದ ವೇದಿಕೆಯಲ್ಲಿ ದಾನಿಗಳಿಗೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಜು ಜರತಾರಘರ, ಸಹ ಸಂಚಾಲಕ ಆನಂದ ಬದ್ದಿ, ಗೌರವ ಕಾರ್ಯದರ್ಶಿ ದೇವದಾಸ್ ಹಬೀಬ್, ಕಿಶೋರ್ ರಥನ್ ಉಪಸ್ಥಿತರಿದ್ದರು.