ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಕಾರಣ 

ದಾವಣಗೆರೆ.ಮಾ.೧೧: ದಾವಣಗೆರೆ ನಗರವು ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಆಡಳಿತವೇ ಕಾರಣ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿ ಮತ್ತು ಸರ್ಕಾರಿ ಪ್ರೌಢಶಾಲೆಯ ನವೀಕೃತ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಾವಣಗೆರೆ ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇದ್ದುದರಿಂದ ದಾವಣಗೆರೆ ನಗರ ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಯಿತು. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಅನೇಕ ಅಭಿವೃದ್ಧಿ ಜೊತೆಗೆ ಶಾಲೆಗಳಿಗೆ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ವತಿಯಿಂದ ಸರ್ಕಾರಿ ಶಾಲಾ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಅಂದಾಜು ರೂ.4 ಕೋಟಿಗಳ ತೆಗೆದಿರಿಸಿ ಅದರಲ್ಲಿ ಇಂದು ಅಂದಾಜು ಮೊತ್ತ ರೂ.80.87 ಲಕ್ಷಗಳ ಮೊತ್ತದಲ್ಲಿ ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6 ಕೊಠಡಿಗಳನ್ನು ಮತ್ತು ಶೌಚಾಲಯ 1 ಯೂನಿಟ್ ಹಾಗೂ ಅಂದಾಜು ಮೊತ್ತ ರೂ.13.78 ಲಕ್ಷಗಳ ಮೊತ್ತದಲ್ಲಿ ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ನವೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ ಮಾತನಾಡಿ ಈ ಶಾಲೆ 1957ರಲ್ಲಿ ಆರಂಭವಾಗಿದ್ದು, ಬಸಾಪುರ ಅನೇಕರು ಅಭ್ಯಸಿರುವ ಶಾಲೆಯನ್ನು ಶಾಮನೂರು ಶಿವಶಂಕರಪ್ಪನವರು ಆಧುನಿಕ ಕೊಠಡಿಗಳನ್ನು ನಿರ್ಮಿಸುವ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಿದ್ದು, ಇದನ್ನು ಗ್ರಾಮದ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಮಾತನಾಡಿ ಈ ಗ್ರಾಮದ ಜನರು ಪಟ್ಟಣದ ಖಾಸಗಿ ಶಾಲೆಗಳಿಗೆ ಮಾರುಹೋಗದೇ ಸರ್ಕಾರದಿಂದ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣವನ್ನು ಕೊಡಿಸಿ ಎಂದು ಮನವಿ ಮಾಡಿದರು.