ಸಂಜೆವಾಣಿ ವಾರ್ತೆ
ದಾವಣಗೆರೆ ಜೂ ೨೩; ಅಜಾತಶತ್ರು, ಉಜ್ಜನಪ್ಪನವರಿಗೆ ಉಜ್ಜನಪ್ಪನವರೇ ಸಾಟಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣವುಳ್ಳವರು, ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೆಲ್ಲರ ಮಧ್ಯೆ ಮಾಣಿಕ್ಯದ ರೂಪದಲ್ಲಿ ಶೋಭಿಸುತ್ತಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ನಮಗೆ ಸದಾ ಮಾರ್ಗದರ್ಶಕರಾಗಿ ನಡೆದುಕೊಂಡವರು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ನುಡಿದರು. ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಲಿಂ. ಎ ಆರ್ ಉಜ್ಜನಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಹಾಗೂ ಜಿಲ್ಲೆಯ ಎಲ್ಲಾ ಕನ್ನಡ ಮನಸುಗಳ ಪರವಾಗಿ ನುಡಿ ನಮನ ಸಲ್ಲಿಸಿದರು.ಕಂದಾಯ ಇಲಾಖೆಯಲ್ಲಿ ಸರ್ಕಾರಿ ಸೇವೆಯನ್ನು ಸಲ್ಲಿಸಿದ ಉಜ್ಜನಪ್ಪನವರು ಅತ್ಯುತ್ತಮ ಸಂಘಟಕರು, ಕ್ರಿಯಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು, ಹೀಗಾಗಿಯೇ ಅವರು ಅನೇಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಘಟನೆಗಳಿಗೆ ಬಲ ತುಂಬಿದವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ಆ ಅವಧಿಯಲ್ಲಿ ಕುವೆಂಪು ಕನ್ನಡ ಭವನದ ನಿರ್ಮಾಣಕ್ಕೆ ಅಂತಿಮ ಸ್ಪರ್ಶ ಕೊಟ್ಟವರು. ಜೊತೆಗೆ ಜಿಲ್ಲೆಯಲ್ಲಿ ಉತ್ತಮ ಸಾಹಿತ್ತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ಸು ಕಂಡವರು. ಕೆಲವರೊಂದಿಗೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅಂಥವರೊಟ್ಟಿಗೂ ಆತ್ಮೀಯತೆಯಿಂದ ನಡೆದುಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡವರು. ಇವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹ ಕೆಲಸವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಿರಿಯ ಸಾಹಿತಿಗಳೊಂದಿಗೆ ಅವರ ಆತ್ಮೀಯ ಒಡನಾಡಿಗಳೆಲ್ಲರೊಂದಿಗೆ ಸೇರಿ ಮಾಡೋಣ ಎಂದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಸಾಹಿತಿ ಬಾ ಮ ಬಸವರಾಜಯ್ಯ ನಾನು ಮತ್ತು ಉಜ್ಜನಪ್ಪನವರು ಅಕ್ಕಪಕ್ಕದ ಗ್ರಾಮದವರು. ಅವರೊಟ್ಟಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕೆಲಸವನ್ನು ನಿರ್ವಹಿಸಿದ್ದೇನೆ. ಅವರೊಬ್ಬ ಅತ್ಯುತ್ತಮ ಸಂಘಟಕರು, ಯಾರೊಂದಿಗೂ ದ್ವೇಷವನ್ನು ಕಟ್ಟಿಕೊಳ್ಳದ ಮಾನವೀಯ ನಡೆತೆಯನ್ನು ರೂಡಿಸಿಕೊಂಡ ಅಪರೂಪದ ವ್ಯಕ್ತಿ ಎಂದು ಮಾತನಾಡಿ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.ಲೋಕೇಶ್ ಅಗಸನಕಟ್ಟೆ ಮಾತನಾಡಿ ಲಿಂ.ಎ ಆರ್ ಉಜ್ಜನಪ್ಪನವರು ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೇಗೆ ಸೇವೆ ಸಲ್ಲಿಸಬಹುದು ಎಂಬುದನ್ನು ತಮ್ಮ ಸಂಘಟನೆಯ ಮೂಲಕ ಸಾಬೀತುಪಡಿಸಿದವರು ಎಂದು ನುಡಿ ನಮನ ಸಲ್ಲಿಸಿದರು.ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ ಎ ಆರ್ ಉಜ್ಜನ ಪ್ಪನವರು ಕನ್ನಡ ಸಾಹಿತ್ಯ ಪರಿಷತ್ತಿನ ಭವನದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಜಿಲ್ಲಾ ಕನ್ನಡ ಮನಸುಗಳನ್ನು ಕಟ್ಟಿದವರೆಂದರು. ಹಿರಿಯ ಪತ್ರಕರ್ತರು ಹಾಗೂ ಸಾಹಿತಿ ಬಿ ಎನ್ ಮಲ್ಲೇಶ್ ಮಾತನಾಡುತ್ತಾ ಲಿಂ. ಎ ಆರ್ ಉಜ್ಜನಪ್ಪನವರು ಏನಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಕ್ರಿಯಾಶೀಲತೆ ಮೈಗೂಡಿಸಿಕೊಂಡವರು. ಸದಾ ಲವಲವಿಕೆಯಲ್ಲಿರುವ ವ್ಯಕ್ತಿ ಎಂದು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು.ಹರಪನಹಳ್ಳಿಯ ಪ್ರಾಂಶುಪಾಲ ಎಚ್ ಮಲ್ಲಿಕಾರ್ಜುನ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಎಚ್ ಎಸ್ ಮಂಜುನಾಥ್ ಕುರ್ಕಿ ಲಯನ್ಸ್ ಮಾಜಿ ಗೌರ್ನರ್ ಎಚ್ಎನ್ ಶಿವಕುಮಾರ್ , ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರರು ಸಾಹಿತಿಗಳು ಆದ ಹೆಚ್ ಬಿ ಮಂಜುನಾಥ್ ನುಡಿ ನಮನ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಡಾ.ದಾದಾಪೀರ್ ನವಿಲೆಹಾಳ್, ಡಾ ಮಂಜಪ್ಪ,ವಿದ್ಯಾನಗರ ಲಯನ್ಸ್ ಅಧ್ಯಕ್ಷರಾದ ದೇವರಾಜ್, ಕಸಾಪ ಪದಾಧಿಕಾರಿಗಳಾದ ಬಿ ದಿಳ್ಯಪ್ಪ,ರೇವಣಸಿದ್ದಪ್ಪ ಅಂಗಡಿ,ಕೆ ರಾಘವೇಂದ್ರ ನಾಯರಿ,ಜಗದೀಶ್ ಕೂಲಂಬಿ,ಜಿಗಳಿ ಪ್ರಕಾಶ್, ಚನ್ನಗಿರಿ ತಾಲೂಕು ಕಸಾಪ ಅಧ್ಯಕ್ಷ ಮಧುಕುಮಾರ್ ಎಲ್ ಜಿ ,ಸತ್ಯಭಾಮ ಮಂಜುನಾಥ್, ರುದ್ರಾಕ್ಷಿಬಾಯಿ, ಮಾಯಕೊಂಡದ ಮರಿಯಾಚಾರ್, ಜ್ಯೋತಿ ಉಪಾಧ್ಯಾಯ, ,ಬೇತೂರು ಷಡಾಕ್ಷರಪ್ಪ, ಭೈರವೇಶ್ವರ ಎಂ ದಾಗಿನಕಟ್ಟೆ ಪರಮೇಶ್ವರಪ್ಪ, ನಾಗರಾಜ್ ಸಿರಿಗೆರೆ, ಶಿವಕುಮಾರ್ ಆರ್, ಎ ಸಿದ್ದೇಶಪ್ಪ,, ಮೌನೇಶ್ವರಚಾರ್,ಪಂಕಜಾಕ್ಷಿ ,ಕಲಾವಿದ ಎ ಮಹಾಲಿಂಗಪ್ಪ,, ಸರ್ಕಾರಿ ನೌಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ, ಕೆ. ಶಿವಶಂಕರ್,ಸಿಂಗಾಪುರದ ಪರಮೇಶಪ್ಪ, ಕೆಂಚನಗೌಡ್ರು,ಸಿ ಆರ್ ಮರಳಪ್ಪ, ಶಿವಬಸಮ್ಮ ಕಲಗೋಟಿ, ಸೌಭಾಗ್ಯ, ಶಶಿರೇಖಾ, ಕಿತ್ತೂರು ಕೊಟ್ರಪ್ಪ, ರಾಮಚಂದ್ರಪ್ಪ, ಜಿಲ್ಲಾ ತಾಲೂಕು ಕ ಸಾ ಪ ಪದಾಧಿಕಾರಿಗಳು, ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು , , ಸ್ಕೌಟ್ ಮತ್ತು ಗೈಡ್ ಸಂಸ್ಥೆ ಹಲವು ಪದಾಧಿಕಾರಿಗಳು ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಲಿಂಗೈಕ್ಯ ಉಜ್ಜನಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಚರಣೆಯಲ್ಲಿ ಪಾಲ್ಗೊಂಡಿದ್ದರು.