ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ

ಕೆ.ಆರ್.ಪೇಟೆ.ಏ.26: ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ಕಟ್ಟಿದವರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಶ್ರೀರಂಗಪ್ಪಟಣದಲ್ಲಿರುವ ಮೂಡಲ ಬಾಗಿಲ ಹನುಮ ಮಂದಿರದಲ್ಲಿ ಹನುಮ ಇರಬೇಕೆ? ಬೇಡವೇ? ಹನುಮ ಇರಬೇಕು ಎಂದಾದರೆ ನೀವು ಬಿಜೆಪಿಗೆ ಮತನೀಡಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.
ಅವರು ಇಂದು ಸಂಜೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭರ್ಜರಿ ರೋಡ್ ಷೋ ನಡೆಸಿ ಅಭ್ಯರ್ಥಿ ಸಚಿವ ಡಾ.ನಾರಾಯಣಗೌಡರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಜೆಡಿಎಸ್ ಅಲ್ಲ. ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ನಮ್ಮ ಬಿಜೆಪಿ. ಒಳ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನಿಡಿದ್ದು ಬಿಜೆಪಿ. ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಭಾರತೀಯ ಜನತಾಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದ್ದು ನಮ್ಮ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯಕೊಡಲು ಸಾಧ್ಯ ಎಂದ ಸಿ.ಟಿ.ರವಿ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ಪ್ರಸ್ತಾಪಿಸಿದರು.
ಮನೆ ಮನೆಗೂ ಕರೆಂಟ್ ನೀಡಿದ್ದು, ಪ್ರತೀ ಮನೆಗೂ ಗ್ಯಾಸ್ ಸಂಪರ್ಕ ಒದಗಿಸಿದ್ದು, ಜಲ ಜೀವನ್ ಮಿಷನ್ ಮೂಲಕ ಪ್ರತಿಯೊಂದು ಮನೆಗೂ ಶುದ್ದ ಕುಡಿಯುವ ನೀರು ಕೊಡುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಜನದನ್ ಖಾತೆ ತೆರೆದು ಪ್ರತಿಯೊಂದು ಕುಟಂಬಕ್ಕೂ ಬ್ಯಾಂಕಿಂಗ್ ಸೌಲಭ್ಯ, ಪ್ರದಾನ ಮಂತ್ರಿ ಆವಾಸ್ ಯೋಜನೆ, ರೈತರ ಖಾತೆಗೆ ಹಣ ಹಾಕಿ ರೈತರ ಕೃಷಿ ಕಾರ್ಯಕ್ಕೆ ಶಕ್ತಿ ನೀಡುವ ಯೋಜನೆ ರೂಪಿಸಿದ್ದು ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರದ ಸಮಗ್ರತೆಯನ್ನು ಕಡೆಗಣಿಸಿರುವ ಕಾಂಗ್ರೆಸ್ ಹಾಗೂ ಸ್ವಾರ್ಥ ಸಾಧನೆ ಮಾಡುತ್ತಿರುವ ಜೆಡಿಎಸ್ ಪಕ್ಷವನ್ನು ರಾಜ್ಯದ ಪ್ರಬುದ್ಧ ಮತದಾರ ಬಂಧುಗಳು ತಿರಸ್ಕರಿಸಿ ರಾಷ್ಟ್ರದ ಏಕತೆ, ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ದುಡಿಯುತ್ತಿರುವ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಸಿ.ಟಿ.ರವಿ ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಹೋರಾಟಗಾರರನ್ನು ಏನಾದರೂ ಸಂಚು ಮಾಡಿ ರಾಜಕೀಯವಾಗಿ ಮುಗಿಸಬೇಕೆಂದು ಸಂಚು ರೂಪಿಸುತ್ತಿವೆ. ನನ್ನ ಮತಕ್ಷೇತ್ರವಾದ ಚಿಕ್ಕಮಗಳೂರಿನಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಶತಾಯಗತಾಯ ಸೋಲಿಸಲೇಬೇಕೆಂದು ಮುಂದಾಗಿವೆ. ಆದೇ ರೀತಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣಗೌರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಹೋರಾಟ ಮಾಡುತ್ತಿವೆ. ನಾರಾಯಣಗೌಡರಿಗೆ ತಾಲೂಕಿನ ಜನತೆಯ ಆಶೀರ್ವಾದವಿದೆ. ನೀವು ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರೆ ರಾಜ್ಯದಲ್ಲಿ ಸುಭದ್ರವಾದ ಬಿಜೆಪಿ ಸರ್ಕಾರವು ಮತ್ತೆ ಆಡಳಿತಕ್ಕೆ ಬರುತ್ತದೆ. ಬಿಜೆಪಿ ಪಕ್ಷವು ಯಾವುದೇ ಹಂಗಿಲ್ಲದೇ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸ್ವತಂತ್ರವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ ನಾನು ಯಾವುದೇ ಸರ್ಕಾರಿ ಆಸ್ತಿಯನ್ನು ಲೂಟಿ ಮಾಡಿಲ್ಲ. ಹಣ ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ತಾಲೂಕಿನ ಮಗ ಬೂಕನಕೆರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬರಲು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಾಲೂಕಿನ ಅಭಿವೃದ್ಧಿಗಾಗಿ ದುಡಿದಿದ್ದೇನೆ. ನನಗೆ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರಮೋದಿ ಅವರ ಕೈ ಬಲಡಿಸುವಂತೆ ಮನವಿ ಮಾಡಿದರು.