ತ.ನಾಡಿಗೆ ನೀರು; ರಾಜ್ಯದಲ್ಲಿ ಕುಡಿಯುವ ನೀರಿಗೆ ಬರ

ಕೆಂಗೇರಿ, ಸೆ. ೧೭: ೧೫ ದಿನ ಪ್ರತಿನಿತ್ಯ ೫,೦೦೦ ಕ್ಯೂಸೆಕ್ ನೀರು ಬಿಡಲೇಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ. ಕೆಆರ್‌ಎಸ್ ಜಲಾಶಯ ನೀರಿಲ್ಲದೆ ಸೊರಗುತ್ತಿದೆ. ಕೆಆರ್‌ಎಸ್ ನೀರು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಲುತ್ತಿಲ್ಲ. ಇನ್ನು ಮಂಡ್ಯ ಸೇರಿದಂತೆ ವಿವಿಧ ಭಾಗಗಳ ರೈತರಿಗೂ ನೀರಿನ ಕೊರತೆ ಎದುರಾಗಿದೆ. ಇದರ ನಡುವೆ ತಮಿಳುನಾಡು ಮೊಂಡುವಾದ ಮುಂದಿಟ್ಟು ಕರ್ನಾಟಕವನ್ನು ಮತ್ತಷ್ಟು ಬರಗಾಲಕ್ಕೆ ತಳ್ಳುತ್ತಿದೆ ಎಂದು “ನಮ್ಮ ಕರ್ನಾಟಕ ಸೇನೆ” ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟಿ ತಿಳಿಸಿದರು.
ಕರ್ನಾಟಕ ಕಾವೇರಿ ಕಳೆ ಸಮಿತಿ ವತಿಯಿಂದ ಮೈಸೂರು ರಸ್ತೆಯ ಕಣ್ಮಣಿಕೆ ಟೋಲ್ ಬಳಿ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಹಾಗೂ ಕಾವೇರಿ ನೀರು ನಿಯಂತ್ರಣ ಮಂಡಳಿಯ ಮಲತಾಯಿ ಧೋರಣೆ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕಕ್ಕೆ ನೀರಿನ ಕೊರತೆಯಾಗುತ್ತದೆ.
ರಾಜ್ಯದಲ್ಲಿನ ಬೆಳೆಗಳಿಗೆ, ನೀರು ಇಲ್ಲದಂತಾಗುತ್ತದೆ. ಕಡೆಗೆ ಕುಡಿಯುವ ನೀರಿಗೆ ಕೊರತೆಯಾಗುವ ಅಪಾಯವೂ ಎದುರಾಗುತ್ತದೆ. ಸಿಎಂ ಸಿದ್ದರಾಮಯ್ಯನವರು ಹಾಗೂ ಡಿ.ಕೆ. ಶಿವಕುಮಾರ್ ರವರು ನಾಡಿನ ಪರ ನಿಲ್ಲಬೇಕು ಎಂದರು.
ಕಾವೇರಿ ನೀರು ಒಂದುತೊಟ್ಟು ಕೂಡಾ ತಮಿಳುನಾಡಿಗೆ ಬಿಡಬಾರದು. ಈಗಾಗಲೇ ನೀರು ಬಿಟ್ಟು ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ.ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು .ನ್ಯಾಯಾಲಯದ ಮುಂದೆ ಕಾವೇರಿ ಕಣಿವೆಯ ವಾಸ್ತವ ಪರಿಸ್ಥಿತಿ ವಿವರಿಸಬೇಕು ಎಂದು ಅವರು ಒತ್ತಾಯಿಸಿದರು.
ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್, ಭಾರತಿ ಸೇವಾ ಸಂಘದ ಅಧ್ಯಕ್ಷ ಹೂಡಿ ಚಿನ್ನಿ, ಉಪಾಧ್ಯಕ್ಷ ಅಂಜನಪ್ಪ ಯಾದವ್, ಜಯ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಸಿ. ರಾಜಪ್ಪ, ಹತ್ತಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.