
ಪಾಟ್ನಾ, ಮಾ.೧೦ – ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸೇರಿದ೨೪ ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶ, ಪಾಟ್ನಾ, ರಾಂಚಿ ಮತ್ತು ಮುಂಬೈನಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ದೆಹಲಿಯ ನಿವಾಸ ಸೇರಿದಂತೆ ೨೪ ಸ್ಥಳಗಳ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದೆ.
ಪ್ರಕರಣದ ಸಂಬಂದ “ಸಾಕ್ಷ್ಯ ಸಂಗ್ರಹಿಸಲು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ದಾಳಿ ನಡೆಸಲಾಗುತ್ತಿದೆ” ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರೀಯ ತನಿಖಾ ದಳ ದೆಹಲಿಯಲ್ಲಿ ಲಾಲು ಯಾದವ್ ಮತ್ತು ಪಾಟ್ನಾದಲ್ಲಿ ರಾಬ್ರಿ ದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು.
ಸೆಪ್ಟೆಂಬರ್ ೨೦೨೧ ರಲ್ಲಿ, ಸಿಬಿಐ ಎಫ್ಐಆರ್ಗೆ ಪೂರ್ವಭಾವಿಯಾಗಿ ಪ್ರಾಥಮಿಕ ತನಿಖೆ ಪ್ರಾರಂಭಿಸಿದೆ. – ೨೦೦೪ ಮತ್ತು ೨೦೦೯ ರ ನಡುವೆ ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿನ ಗ್ರೂಪ್ ಡಿ ಹುದ್ದೆಗಳಲ್ಲಿ ಮಾರ್ಗಸೂಚಿಗಳನ್ನು ಅನುಸರಿಸದೆ ವಿವಿಧ ವ್ಯಕ್ತಿಗಳನ್ನು ಬದಲಿಯಾಗಿ ನೇಮಿಸಲಾಗಿದೆ ಎಂಬ ಆರೋಪ ಇದಾಗಿದೆ.
ಸಿಬಿಐ ಕಳೆದ ವರ್ಷ ಮೇ ೧೮ ರಂದು ಯಾದವ್, ರಾಬ್ರಿ ದೇವಿ ಮತ್ತು ಅವರ ಇಬ್ಬರು ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ ಮತ್ತು ಅಪರಿಚಿತ ಸರ್ಕಾರಿ ಅಧಿಕಾರಿಗಳನ್ನು ಹೆಸರಿಸಿ ಎಫ್ಐಆರ್ ದಾಖಲಿಸಿದೆ.
೨೦೦೪-೦೯ರ ಅವಧಿಯಲ್ಲಿ ಪ್ರಸಾದ್ ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ, ೧೨ ಅಭ್ಯರ್ಥಿಗಳ ನೇಮಕಾತಿಗಳನ್ನು ಕೇಂದ್ರ ರೈಲ್ವೇಯಲ್ಲಿ ಮಾಡಲಾಗಿದೆ, ನೇಮಕಾತಿಗಾಗಿ ಭಾರತೀಯ ರೈಲ್ವೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.