
ಚಿದಾನಂದ ದೊರೆ
ಸಿಂಧನೂರ,ಫೆ.೨೪- ಬದಲಾದ ರಾಜಕೀಯ ಪರಿಸ್ಥಿತಿಯ ಅನುಗುಣವಾಗಿ ತಮ್ಮ ರಾಜಕೀಯ ಜೀವನದ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಜೆಡಿಎಸ್ ಪಕ್ಷದ ನಗರಸಭೆಯ ಸದಸ್ಯರಾದ ಕೆ. ಹನುಮೇಶ, ಅವರ ತಂದೆ ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ. ಮರಿಯಪ್ಪ, ಕಾಂಗ್ರೆಸ್ ಪಕ್ಷದ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಕೆ. ಕರಿಯಪ್ಪ ಬಿಜೆಪಿಯ ಕಡೆ ಮುಖ ಮಾಡಿದ ಬಗ್ಗೆ ಸುದ್ದಿಗಳು ಹರಿದಾಡುತ್ತೀವೆ.
ಆದರೆ ಕೆ. ಹನಮೇಶ, ಮರಿಯಪ್ಪ ಇವರು ಜೆಡಿಎಸ್ ಬಿಟ್ಟು ಬಿಜೆಪಿಯ ಸೇರುವುದು ಪಕ್ಕಾ. ಕೆ ಕರಿಯಪ್ಪ ಇವರ ನಡೆ ಇನ್ನೂ ನಿಗೂಢವಾಗಿದೆ. ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ. ಮರಿಯಪ್ಪ ಮಾಜಿ ಸಂಸದರಾದ ಕೆ. ವಿರುಕ್ಷಪ್ಪನವರ ಕಟ್ಟಾ ಅಭಿಮಾನಿ ಬದಲಾದ ರಾಜಕೀಯ ಪರಿಸ್ಥಿತಿಯ ಅನುಗುಣವಾಗಿ ತಮ್ಮ ಗುರುವಿನ ಸಹವಾಸ ಸಾಕು ಎಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ನಡೆದ ನಗರ ಸಭೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಕೆ, ಮರಿಯಪ್ಪನವರ ಮಗ ನಗರ ಸಭೆಯ ಸದಸ್ಯರಾಗಿ ಕೆ. ಹನಮೇಶ ಆಯ್ಕೆಯಾದರು .
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವ ಬಗ್ಗೆ ಪಕ್ಷದ ಮುಖಂಡರು ಭರವಸೆ ನೀಡಿದ ಕಾರಣ ಕೆ. ಮರಿಯಪ್ಪ ಹಾಗೂ ಅವರ ಮಕ್ಕಳು ಬಿಜೆಪಿ ಸೇರಲು ನಿರ್ಧಾರ ಮಾಡಿ ತಮ್ಮ ಬೆಂಬಲಿಗರೊಂದಿಗೆ ಫೆ.೨೫ ರಂದು ಪಕ್ಷದ ಅಧ್ಯಕ್ಷರಾದ ನಳೀನ ಕುಮಾರ ಕಟೀಲ್ ನಗರಕ್ಕೆ ಬರಲಿದ್ದು, ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಅದಕ್ಕಾಗಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಅವರ ಹಾಗೂ ಬಿಜೆಪಿಯ ಪಕ್ಷದ ಮುಖಂಡರ ಬ್ಯಾನರ್ ಕಟೌಟಗಳು ರಾರಾಜಿಸುತ್ತಿರುವದನ್ನು ಕಾಣಬಹುದು.
ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ೨೦೨೩ ವಿಧಾನ ಸಭೆ ಚುನಾವಣೆಯ ಪಕ್ಷದ ಪ್ರಬಲ ಆಕಾಂಕ್ಷಿಯಾದ ಕೆ. ಕರಿಯಪ್ಪ ಸಹ ಕಾಂಗ್ರೆಸ್ಗೆ ಕೈಕೊಟ್ಟು ಕಮಲ ಇಡಿಯುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದು ಎಷ್ಷು ಸತ್ಯ ಎನ್ನುವದು ಕೆ. ಕರಿಯಪ್ಪ ಅವರೆ ಸ್ಪಷ್ಟನೆ ನೀಡಬೇಕಾಗಿದೆ
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ, ಬಸನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವದು ಈ ಮೂವರಲ್ಲಿ ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಆದರು ಈ ಸಲ ಟಿಕೆಟ್ ನನಗೆ ಎಂದು ಹೇಳಿಕೊಂಡು ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಇತ್ತೀಚಿಗೆ ಸಿಂಧನೂರಿಗೆ ಬಂದಾಗ ಪಕ್ಷದ ಅಭ್ಯರ್ಥಿ ಯಾರು ಯಾರಿಗೆ ಟಿಕೆಟ್ ಖಚಿತ ಎಂದು ಪತ್ರಕರ್ತರು ಕೇಳಿದಾಗ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಎಂದರು. ಆಗ ಪಕ್ಕದಲ್ಲಿದ್ದ ಹಂಪನಗೌಡ ಬಾದರ್ಲಿ ಮಾತ್ರ ನಸು ನಕ್ಕು ಸುಮ್ಮನೆಯಾದರು. ಅಂದು ಹಂಪನಗೌಡ, ಬಸನಗೌಡ, ಕೆ ಕರಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಸಿದ್ಧರಾಮಯ್ಯಗೆ ಭವ್ಯ ಸ್ವಾಗತ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಸಿದ್ಧರಾಮಯ್ಯನವರ ಕಟ್ಟಾ ಅಭಿಮಾನಿಯಾದ ಕೆ.ಕರಿಯಪ್ಪ ಕಲ್ಯಾಣ ಕರ್ನಾಟಕ ಬಾಗದಿಂದ ಕುರುಬ ಸಮುದಾಯದ ಪ್ರಬಲ ಯುವ ನಾಯಕರಾಗಿದ್ದು ಸಾಮಾಜಿಕ ನ್ಯಾಯದಡಿಯಲ್ಲಿ ಕೆ. ಕರಿಯಪ್ಪ ನವರಿಗೆ ಈ ಸಲ ಟಿಕೆಟ್ ನೀಡುವಂತೆ ಈ ಭಾಗದ ಸಮಾಜದ ಮುಖಂಡರು ಶಾಸಕರು ಹಾಗೂ ಅವರ ಅಭಿಮಾನಿಗಳು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ ,ಮೇಲೆ ಒತ್ತಡ ಹಾಕಿ ಆಗ್ರಹ ಪಡಿಸಿದ್ದಾರೆ.
ಪಕ್ಷದ ಟಿಕೆಟ್ ಸಿಕ್ಕರೆ ಓಕೆ ಇಲ್ಲದಿದ್ದರೆ ಬೇರೆ ಪಕ್ಷದಿಂದ ಸ್ಪರ್ಧಿಸುವಂತೆ ಕರಿಯಪ್ಪನವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರ ಮೇಲೆ ಒತ್ತಡ ಹಾಕಿದ್ದು, ಇತ್ತೀಚಿನ ಬೆಳವಣಿಗೆಯನ್ನು ನೋಡಿದರೆ ಹಂಪನಗೌಡ ಅಥವಾ ಬಸನಗೌಡ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಲಕ್ಷಣಗಳು ಕಾಣುತ್ತಿದ್ದು, ಎಲ್ಲೂ ಕರಿಯಪ್ಪನವರು ಹೆಸರು ಮುಂಚುಣಿಗೆ ಬರುತ್ತಿಲ್ಲ ಇವರಿಬ್ಬರಲ್ಲಿ ತೀವ್ರ ಪೈಪೋಟಿ ನಡೆದಿದೆ.
ತಮಗೆ ಟಿಕೆಟ್ ಸಿಗುವುದು ಡೌಟ್ ಎನ್ನುವದನ್ನು ತಿಳಿದುಕೊಂಡ ಮೇಲೆ ಕರಿಯಪ್ಪ ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಬಿಜೆಪಿಯ ಪಕ್ಷದ ಮುಖಂಡರನ್ನು ಬೆಂಗಳೂರಿನಲ್ಲಿ ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅದು ಒಕೆ ಆದರೆ ಮರಿಯಪ್ಪ ನವರ ನಂತರ ಕೆ.ಕರಿಯಪ್ಪ ಕಾಂಗ್ರೆಸ ಗೆ ಕೈಕೊಟ್ಟು ಬಿಜೆಪಿ ಕಮಲ ಇಡಿದು ಚುನಾವಣೆಗೆ ಸ್ಪರ್ಧೆ ಮಾಡುವದು ಖಚಿತ ಕರಿಯಪ್ಪ ಸೇರಿದಂತೆ ಯಾರೆ ಪಕ್ಷಕ್ಕೆ ಬಂದರು ಸ್ವಾಗತ ಆದರೆ ಟಿಕೆಟ್ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡಗೆ ಬಿಟ್ಟ ವಿಚಾರ ಎಂದು ಬಿಜೆಪಿಯ ಹಿರಿಯ ಮುಖಂಡ ರಾದ ಇರೇಶ ಇಲ್ಲೂರು ಪತ್ರಿಕೆಗೆ ತಿಳಿಸಿದರು.