ತುಕಡೆ ಗ್ಯಾಂಗ್ ನಿಂದನೆ:ಕಂಗನಾ ಹಣಕ್ಕೆ ಕತ್ತರಿ

ಮುಂಬೈ,ಮೇ.೧೮-ವಿವಾದಗಳಿಂದಲೇ ಸಹಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಪ್ರತಿ ಬಾರಿಯೂ ಬಾಲಿವುಡ್ ನಟ, ನಟಿಯರು ಹಾಗೂ ನಿರ್ದೇಶಕರ ವಿರುದ್ಧ ಕಿಡಿಕಾರುತ್ತಿದ್ದ ಕಂಗನಾ ಈ ಬಾರಿ ರಾಜಕಾರಣಿಗಳು, ರಾಜಕೀಯ ವಿರೋಧಿಗಳು ಹಾಗೂ ತುಕಡೆ ತುಕಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಾರೆ. ಇವರನ್ನು ವಿರೋಧಿಸಿದ್ದಕ್ಕಾಗಿ ಭಾರೀ ಪ್ರಮಾಣದಲ್ಲಿ ದಂಡ ತೆತ್ತಿರುವ ಕುರಿತು ಮಾತನಾಡಿದ್ದಾರೆ.
ನಾನು ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ, ತುಕಡೆ ತುಕಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಕ್ಕೆ ಈ ವರ್ಷದಲ್ಲಿ ಕನಿಷ್ಠ ೩೦ ರಿಂದ ೪೦ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆ. ಕನಿಷ್ಠ ೨೫ ಜಾಹೀರಾತುಗಳಿಂದ ನಾನು ಆಚೆ ಬಂದಿದ್ದೇನೆ. ಈ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದಕ್ಕೆ ರಾತ್ರೋರಾತ್ರಿ ಜಾಹೀರಾತುಗಳಿಂದ ನನ್ನನ್ನು ಕೈ ಬಿಟ್ಟರು. ಆದರೂ, ನಾನು ಮಾತನಾಡುವುದನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ.
ಕಂಗನಾ ಈ ಮಾತುಗಳನ್ನು ಆಡುವುದಕ್ಕೆ ಕಾರಣ ಎಲಾನ್ ಮಸ್ಕ್ ಸಂದರ್ಶನ. ಶ್ರೀಮಂತ ಉದ್ಯಮಿ ಎಲಾನ್ ಸಂದರ್ಶನವೊಂದರಲ್ಲಿ ‘ನಾನು ಅನಿಸಿದ್ದನ್ನು ಹೇಳಿದ್ದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡೆ’ ಎಂದಿದ್ದರು. ಈ ಮಾತುಗಳಿಗೆ ಉತ್ತರ ಎನ್ನುವಂತೆ ತಾವೂ ಹಣ ಕಳೆದುಕೊಂಡಿದ್ದರ ಬಗ್ಗೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.