ಚಿಂಚೋಳಿ,ಜು.25- ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಗಾರಂಪಳ್ಳಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಕೆಲವು ಹಳ್ಳಿಗಳು ಸಂಪರ್ಕವನ್ನು ಕಳೆದುಕೊಂಡಿವೆ.
ನರನಾಳ ಕೆರೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನೀರು ಬಿಡುಗಡೆಯಾಗುತ್ತಿದ್ದು, ಮುಲ್ಲಾಮಾರಿ ನದಿಯ ಪಕ್ಕದಲ್ಲಿರುವ ಹಳ್ಳಿಗಳಾದ ಚಿಮನಚೋಡ್, ತಾದಲಾಪುರ್, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ಮತ್ತು ನಿಮ್ಮಹೊಸಳ್ಳಿ ಗ್ರಾಮಗಳಿಗೆ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.
ಇಲ್ಲಿನ ನೂರಾರು ಎಕರೆ ಬೆಳೆಗಳು ಹಾಳಾಗಿದೆ, ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಮತ್ತು ರೋಗಿಗಳು ಆಸ್ಪತ್ರೆಗೆ ಹೋಗಲು ರಸ್ತೆ ಸಂಪರ್ಕ ಕಡಿತಗೊಂಡಿದೆ ಅಲ್ಲದೇ ಮಳೆಯಿಂದಾಗಿ ಶವ ಸಂಸ್ಕಾರ ಮಾಡಲು ಬಹಳಷ್ಟು ತೊಂದರೆಗಳಾಗುತ್ತಿವೆ.
ಶಾಸಕರು ಈಗಾಗಲೇ ಬಂದು ಜನರೊಂದಿಗೆ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಸೇತುವೆಗಳು ಮೇಲ್ದರ್ಜೆಗೆ ಏರಿಸಲು ಭರವಸೆಯನ್ನು ಕೊಟ್ಟಿದ್ದಾರೆ
ಆದರೆ ಇಲ್ಲಿಯವರೆಗೆ ಕಲ್ಬುರ್ಗಿ ಉಸ್ತುವಾರಿ ಸಚಿವರು ಬರಲಿಲ್ಲ ಯಾವ ರಾಜ್ಯದ ಮಂತ್ರಿಗಳು ಬರಲಿಲ್ಲ ಕೇಂದ್ರ ಮಂತ್ರಿಗಳು ಬರಲಿಲ್ಲ ಯಾವ ಲೋಕಸಭಾ ಸದಸ್ಯರು ಬರಲಿಲ್ಲ ಸುಮಾರು ಒಂದು ವಾರದಿಂದ ಈ ಭಾಗದಲ್ಲಿ ದೊಡ್ಡ ಪ್ರಮಾಣದ ಮಳೆಯಾಗುತ್ತಿದೆ.
ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆದರೂ ಕೂಡ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರವು ವಿಫಲ ಕಾಣುತ್ತಿದೆ ಎಂದು ಗಾರಂಪಳ್ಳಿ ಗ್ರಾಮದ ಬಿಜೆಪಿ ಪಕ್ಷದ ಮುಖಂಡ ಹಣಮಂತ ಭೋವಿ ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಸರ್ಕಾರ ಕೊಡಲೇ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.