ದಾವಣಗೆರೆ..ಜೂ.೧; ಮಾರಣಾಂತಿಕ ದುಶ್ಚಟಗಳಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯೂ ಒಂದಾಗಿದ್ದು ಭಾರತ ದೇಶದಲ್ಲಿ ವಾರ್ಷಿಕ ಸುಮಾರು 14 ಲಕ್ಷದಷ್ಟು ಸಾವುಗಳು ಇದರಿಂದಾಗಿ ಆಗುತ್ತಿದೆ, ಇವರಲ್ಲಿ ಯುವಕರು ಮತ್ತು ಮಧ್ಯ ವಯಸ್ಕರೆ ಹೆಚ್ಚು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು. ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೊನ್ನಾಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ ವತಿಯಿಂದ ಹೊನ್ನಾಳಿ ಹೆಚ್ ಕಡದ ಕಟ್ಟೆಯ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಾಡಾಗಿದ್ದ “ವಿಶ್ವ ತಂಬಾಕು ರಹಿತ ದಿನಾಚರಣೆ” ಕಾರ್ಯಕ್ರಮದ ಪ್ರಧಾನ ಉಪನ್ಯಾಸಕರಾಗಿ ಮಾತನಾಡುತ್ತಾ, ನಮ್ಮ ದೇಶದಲ್ಲಿ ಸುಮಾರು 27 ಕೋಟಿಯಷ್ಟು ಮಂದಿ ಧೂಮಪಾನ, ಗುಟ್ಕಾ, ಜರ್ದಾ ಸೇವನೆ ಮುಂತಾದ ವಿವಿಧ ಬಗೆಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ಹೃದಯಬೇನೆ, ಪಾರ್ಶ್ವವಾಯು, ದ್ವಿತೀಯ ಬಗೆಯ ಮಧುಮೇಹ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಬೀಡಿ ಸಿಗರೇಟಿನ ಹೊಗೆಯಲ್ಲಿ ಸುಮಾರು ಏಳು ಸಾವಿರ ಬಗೆಯ ವಿಷಕಾರಿ ರಾಸಾಯನಿಕಗಳ ಮಿಶ್ರಣವಿದ್ದು ತಂಬಾಕಿನ ನಿಕೋಟಿನ್ನು ಚಟ ಹುಟ್ಟಿಸುವ ವಿಷವಾಗಿದ್ದು ಇದು ದೇಹವನ್ನು ಪ್ರವೇಶಿಸಿದಾಗ ಹೃದಯದ ಆಮ್ಲಜನಕ ಬಳಕೆ ಹೆಚ್ಚಾಗುತ್ತದೆ ಇದರಿಂದಾಗಿ ಏನೋ ಒಂದು ಆರಾಮದ ಅನುಭವವಾಗುತ್ತದೆ, ಆದರೆ ಧೂಮಪಾನವು ಸ್ವಾಶಕೋಶವನ್ನು ಸೇರಿ ಅಪಾಯಕಾರಿ ಜೀವಕೋಶಗಳನ್ನು ವೃದ್ಧಿ ಮಾಡುವುದಲ್ಲದೆ ಕ್ಯಾನ್ಸರ್ ಗೆ ಕಾರಣವಾಗುತ್ತಿದ್ದು ಶ್ವಾಸಕೋಶದ ಕ್ಯಾನ್ಸರ್ ಗೆ ಬಲಿಯಾಗುತ್ತಿರುವವರಲ್ಲಿ ಶೇಕಡಾ 90ರಷ್ಟು ಧೂಮಪಾನಿ ಗಳೇ ಆಗಿದ್ದಾರೆ ಎಂದ ಹೆಚ್ ಬಿ ಮಂಜುನಾಥ್ ಧೂಮಪಾನ ಹಾಗೂ ತಂಬಾಕು ಗುಟ್ಕಾ ಸೇವನೆಯಿಂದಾಗಿ ಮೆದುಳಿನ ರಕ್ತನಾಳಗಳ ಒಡೆಯುವಿಕೆಯು ಆಗಿ ಪಾಶ್ವ ವಾಯು ಉಂಟಾಗುವ ಸಂಭವವಿರುತ್ತದೆ, ಹೃದಯಬೇನೆ ಹಾಗೂ ಅಸ್ತಮಾಕ್ಕೂ ಕಾರಣವಾಗಬಹುದು, ಆದ್ದರಿಂದಲೇ “ಧೂಮಪಾನ ಹಾಗೂ ತಂಬಾಕು ಸೇವನೆಯು ಆತ್ಮಹತ್ಯೆಯ ಕಂತುಗಳಿದ್ದಂತೆ” ಎಂದು ವೈದ್ಯಕೀಯ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ, ವಿಶ್ವದಲ್ಲಿ ವಾರ್ಷಿಕ ಸುಮಾರು 35 ಲಕ್ಷ ಎಕರೆಯಷ್ಟು ಭೂಮಿ ತಂಬಾಕು ಬೆಳೆಗಾಗಿ ವಿಸ್ತರಣೆ ಆಗುತ್ತಿದ್ದು ಇದರಿಂದಾಗಿ ವಾರ್ಷಿಕ ಸುಮಾರು ಐದು ಲಕ್ಷ ಹೆಕ್ಟೇರ್ ನಷ್ಟು ಅರಣ್ಯವೂ ನಾಶವಾಗುತ್ತಿದೆ, ಇದು ಆಹಾರ ಉತ್ಪಾದನೆಯನ್ನು ಸಹಾ ಕುಂಠಿತಗೊಳಿಸುತ್ತಿದ್ದು ಈ ಕಾರಣಕ್ಕಾಗಿ ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯ ಘೋಷ ವಾಕ್ಯವು “ನಮಗೆ ಆಹಾರ ಬೇಕು, ತಂಬಾಕು ಬೇಡ” ಎಂಬುದಾಗಿದೆ ಎಂದರಲ್ಲದೇ ಒಳ್ಳೆಯ ಅಭ್ಯಾಸಗಳು ಸಂಸ್ಕೃತಿಯಾದರೆ ದುರಭ್ಯಾಸಗಳು ವಿಕೃತಿಯಾಗುತ್ತದೆ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹೆಚ್. ಬಾಬುರವರು ದುಶ್ಚಟಗಳನ್ನು ಬಿಡಲು ದೃಢಸಂಕಲ್ಪ ಬೇಕು ದುರಭ್ಯಾಸಗಳಿಂದ ದೂರವಿರಬೇಕು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು ಎಂದರು. ಉಪಸ್ಥಿತರಿದ್ಧು ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬಿ ಎಲ್ ಕುಮಾರಸ್ವಾಮಿಯವರು ಸರ್ಕಾರಗಳು ಸರಿಯಾದ ಅಭಿವೃದ್ಧಿ ಪೂರಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಲ್ಲಿ ಮಾತ್ರ ಉತ್ತಮ ಭವಿಷ್ಯ ಸಾಧ್ಯ ಎಂದರು.