ತಂದೆಯ ಕೈ ಹಿಡಿದರೆ ಬೇರೆಯವರ ಕಾಲು ಹಿಡಿಯುವ ಅವಶ್ಯಕತೆ ಇಲ್ಲ: ಸಜ್ಜನ್

ಕಲಬುರಗಿ:ಜು.4:ಜೀವನದಲ್ಲಿ ತಂದೆಯ ಕೈ ಹಿಡಿದರೆ, ಜಗತ್ತಿನಲ್ಲಿ ಬೇರೆ ಯಾವ ವ್ಯಕ್ತಿಯ ಕಾಲು ಹಿಡಿಯುವ ಅವಶ್ಯಕತೆ ಬರುವುದಿಲ್ಲ ಎಂದು ಜಿಲ್ಲಾ ಫಾರ್ಮಸಿಸ್ಟ್ ಅಧಿಕಾರಿಯಾದ ಬಸವರಾಜ ಸಜ್ಜನ್ ಹೇಳಿದರು.
ಕಲಬುರಗಿ ನಗರದ ಭವಾನಿ ನಗರದಲ್ಲಿ ಬಬಲಾದ ಮಠದಲ್ಲಿ 164 ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮನುಷ್ಯನ ಒಬ್ಬರಿಗೊಬ್ಬರ ಸಂಬಂಧಗಳು ಯಾವ ರೀತಿ ಇರಬೇಕೆಂದು ಕಳೆದ ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಪಾಠ ಕಲಿತಿದ್ದೇವೆ. ಹುಟ್ಟು ಸಹಜ ಸಾವು ಅನಿವಾರ್ಯ ಹುಟ್ಟು ಸಾವಿನ ಮಧ್ಯ ಉತ್ತಮವಾದ ಜೀವನ ಸಾಗಿಸಿ ಒಳ್ಳೆಯ ಸಮಾಜ ನಿರ್ಮಿಸುವ ಕಾರ್ಯ ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಸೇವೆಗೈಯಿತ್ತಿರುವ ಸಂಜೀವಕುಮಾರ ಖೇಳಗಿ ಆಗಮಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ್ ಮಿರ್ಕಲ್, ಶರಣು ಜವಳಗಾ, ಸಿದ್ದಣ್ಣ ವಾಡಿ, ಗುರುರಾಜ ಹಸರಗುಂಡಗಿ, ಜಗನ್ನಾಥ ಸಜ್ಜನ, ಶಿವಶರಣಪ್ಪ ಮಾಲಿಪಾಟೀಲ, ಮಹೇಶ್ವರಿ ನಾಗೂರ ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.