ಡಾ.ಶಿವಕುಮಾರ ಮಹಾಸ್ವಾಮೀಜಿ ನಾಡಿನ ಮಹಾನ ಶಕ್ತಿ

ಕಲಬುರಗಿ,ಏ.01: ಸಮಾಜದಲ್ಲಿರುವ ಲಕ್ಷಾಂತರ ಬಡ, ದೀನ, ದಲಿತ, ಶೋಷಿತ, ಅನಾಥ ಮಕ್ಕಳಿಗೆ ಅನ್ನ, ಜ್ಞಾನ,ಆಶ್ರಯ ಎಂಬ ತ್ರಿವಿಧ ದಾಸೋಹ ನೀಡಿದ, ಸಂಸ್ಕಾರ, ಮಾನವೀಯೆತೆಯನ್ನು ಮೈಗೂಡಿಸಿದ, ಲಕ್ಷಾಂತರ ಬಡ ಮಕ್ಕಳ ಬದುಕನ್ನು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿಗಳಾಗಿದ್ದಾರೆ. ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನನ್ನು ಕಂಡು ದೈವತ್ವಕ್ಕೇರಿದ್ದಾರೆ. ಅವರೊಬ್ಬ ವ್ಯಕ್ತಿಯಾಗಿರದೆ, ನಾಡಿನ ಮಹಾನ ಶಕ್ತಿಯಾಗಿದ್ದಾರೆ ಎಂದು ಚಿಣಮಗೇರಾದ ವೀರಮಹಾಂತ ಶಿವಾಚಾರ್ಯರು ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿ ‘ಸಿದ್ದಗಂಗಾ ಗೆಳೆಯರ ಹಾಗೂ ಹಿತೈಷಿಗಳ ಬಳಗ’ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿಗಳ 116ನೇ ಜಯಂತಿ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ, ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡುತ್ತಿದ್ದರು.
ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ಕಾಯಕ, ದಾಸೋಹ ಸಂಸ್ಕøತಿ, ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದರು.
ಸಿದ್ದಗಂಗಾ ಗೆಳೆಯರ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಶಿವಪ್ಪಗೌಡ ಎಸ್.ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಪರಸ್ವರ ಪ್ರೀತಿ, ಶಾಂತಿಯಿಂದ ಬದುಕಬೇಕು, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದೇ ಧರ್ಮ, ಶರಣರ, ಮಹಾತ್ಮರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಕಾಯಕ-ದಾಸೋಹ ಸಂಸ್ಕøತಿ ನಮ್ಮದಾಗಬೇಕೆಂಬ ಶ್ರೀಗಳ ಸಂದೇಶ ಪ್ರಸ್ತುತ ಸಮಾಜಕ್ಕೆ ಅವಶ್ಯಕವಾಗಿದೆ. ಶ್ರೀಗಳು ಮಾಡಿರುವ ಸಾಧನೆ, ಸಮಾಜಕ್ಕೆ ನೀಡಿರುವ ಕೊಡುಗೆ ಮಾನವ ಜನಾಂಗ ಎಂದಿಗೂ ಮರೆಯುವಂತಿಲ್ಲವೆಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಮಹಾಪೌರ ಶಿವಾನಂದ ಪಿಸ್ತಿ, ಪ್ರಮುಖರಾದ ಎಚ್.ಬಿ.ಪಾಟೀಲ, ಮಲ್ಲಿಕಾರ್ಜುನ ಸಾರವಾಡ್, ಶ್ರೀಧರ ನಾಗನಳ್ಳಿ, ಸಿದ್ದರಾಮ ಶೇಗಜಿ, ವಿಶ್ವನಾಥ ಶೇಗಜಿ, ವಿಶ್ವನಾಥ ಗೋನಾಕಿ, ಅಣ್ಣಾರಾಯ ಪಾಟೀಲ ಮಿಣಜಗಿ, ಶ್ರೀಗುರು ವಾಲಿ, ದತ್ತು ಕರಿಕೋಟಾ, ಶ್ರೀಶೈಲ್ ಮಮ್ಮಾಣಿ, ನಾಗರಾಜ ಪಾಟೀಲ, ಸಿದ್ದರಾಮ ಪೊಳಿಸ್ ಪಾಟೀಲ್, ಯಶವಂತ ಕೋಳಕೂರ, ನಾಗರಾಜ ಬಿಲಗುಂದಿ, ಈಶ್ವರ ಪಣಶೆಟ್ಟಿ, ಶಿವಕುಮಾರ ಕುಮಸಿ, ಬಸವರಾಜ ದುರ್ಗದ್, ಶಿವರಾಜ ಸಾಲಕ್ಕಿ, ಮಂಜು ಹಿರೋಳ್ಳಿ, ವೀರಣ್ಣ ಡಿ.ಪಟ್ಟಣ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಮಾಜಿ ಸೈನಿಕ ರೇಣುಕಾಚಾರ್ಯ ಸ್ಥಾವರಮಠ, ಆರೋಗ್ಯ ವೈದ್ಯಾಧಿಕಾರಿ ಡಾ.ರಾಕೇಶ ಚವ್ಹಾಣ ಮತ್ತು ಪ್ರಗತಿಪರ ರೈತ ನಾಗರಾಜ ಬಿ.ಶೇಗಜಿ ಅವರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು. ನಂತರ ಪ್ರಸಾದ ವಿತರಣೆ ಜರುಗಿತು.