
ಕಲಬುರಗಿ:ಎ.2: ಡಾ.ಶಿವಕುಮಾರ ಮಹಾಸ್ವಾಮೀಜಿಯವರು ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ಕಾಯಕ, ದಾಸೋಹ ಸಂಸ್ಕøತಿ, ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ಸರಡಗಿ ಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾಯಕಯೋಗಿ ಸೇವಾ ಸಂಸ್ಥೆ’ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿಗಳ 116ನೇ ಜಯಂತಿ, ವಿವಿಧ ಕ್ಷೇತ್ರದ ಸಾಧಕರಿಗೆ ‘ಕಾಯಕ ರತ್ನ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡುತ್ತಾ, ಲಕ್ಷಾಂತರ ಬಡ ಮಕ್ಕಳ ಬದುಕನ್ನು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಶ್ರೀಗಳಾಗಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಪಂಡಿತ ರಘುನಾಥ ನಾಕೋಡ್, ಪ್ರಶಸ್ತಿ-ಪುರಸ್ಕಾರಗಳು ಸಾಮಾಜಿಕ ಸೇವೆ ಮತ್ತು ಸಾಧನೆಗೆ ಪ್ರೇರಣೆ ನೀಡುತ್ತವೆ. ಕಲ್ಯಾಣ ಕರ್ನಾಟಕ ಭಾಗದ ಹಲವಾರು ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಸಂಗೀತದ ವಾತಾವರಣ ಸೃಷ್ಟಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ. ಸಂಗೀತದಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜೊತೆಗೆ ಹಲವಾರು ರೋಗ-ರುಜಿನಿಗಳು ದೂರವಾಗುತ್ತವೆ. ಆದ್ದರಿಂದ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಡಾ.ವಾಸುದೇವ ಸೇಡಂ, ಶಿವರಾಜ ಪಾಟೀಲ, ಎಚ್.ಬಿ.ಪಾಟೀಲ, ಮಹಾಂತೇಶ ರೋಜಾ, ಶರಣಬಸಪ್ಪ ಕುಲಕರ್ಣಿ, ಕೇದಾರ ಕುಲಕರ್ಣಿ ವೇದಿಕೆ ಮೇಲಿದ್ದರು. ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ನೀಲಕಂಠಯ್ಯ ಹಿರೇಮಠ, ಶಿವಕುಮಾರ ಮಠಪತಿ, ಮಹೇಶ ಸ್ವಾಮಿ, ಬಂಡಯ್ಯ ಸ್ವಾಮಿ, ರವೀಂದ್ರ ಬಿ.ಕೆ., ಮಹಾಂತೇಶ ನಲವತ್ತವಾಡ್, ರಾಜು ಹೆಬ್ಬಾಳ, ಲಲಿತಾ ಹೆಬ್ಬಾಳ, ರಾಜು ಡಿಗ್ಗಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಯಕ ರತ್ನ ಪ್ರಶಸ್ತಿ ಪುರಸ್ಕøತರು : ಪಂಡಿತ ರಘುನಾಥ ನಾಕೋಡ್, ರೇಣುಕಾ ಆರ್.ನಾಕೋಡ್(ಸಂಗೀತ), ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ(ಸಮಾಜ ಸೇವೆ), ಶರಣಪ್ಪ ಶೆಟಗಾರ(ರಂಗಭೂಮಿ), ಧರ್ಮಣ್ಣ ಧನ್ನಿ(ಸಾಹಿತ್ಯ), ರಾಜಶ್ರೀ ಕುಲಕರ್ಣಿ(ಶಿಕ್ಷಣ), ವೀರಣ್ಣ ವಿಶ್ವಕರ್ಮ(ಪುರವಂತಿಕೆ), ಅನ್ನುಬಾಯಿ ಎಸ್.ಹಿರೇಮಠ(ಕೃಷಿ), ಶಿವಲಿಂಗ ಶಾಸ್ತ್ರಿ ಗರೂರ್(ಆಧ್ಯಾತ್ಮಿಕ), ಕನ್ನಿರಾಮ ನಾಯಕ(ಮಾಜಿ ಸೈನಿಕ) ಅವರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.