
ಬೆಂಗಳೂರು,ಜು.೧-ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಗಣಂಗೂರು ಬಳಿ ಟೋಲ್ ಶುಲ್ಕ ಸಂಗ್ರಹ ಸ್ಥಳೀಯರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಹೆಚ್ಚಳವಾಗಲಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಟೋಲ್ ಸಂಗ್ರಹ ಆರಂಭವಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಎರಡನೇ ಟೋಲ್ ಶುಲ್ಕ ಸಂಗ್ರಹ ಕೇಂದ್ರ ಆರಂಭಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಂಗೂರಿನಲ್ಲಿ ಇಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಟೋಲ್ ಶುಲ್ಕ ಹೆಚ್ಚಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಮನಗರದಲ್ಲಿ ತಿಂಗಳ ಹಿಂದಷ್ಟೇ ಟೋಲ್ ಶುಲ್ಕ ಸಂಗ್ರಹ ಆರಂಭಿಸಲಾಗಿತ್ತು. ಇದೀಗ ಎರಡನೇ ಸ್ಥಳದಲ್ಲಿ ಸಂಗ್ರಹಿಸುತ್ತಿರುವುದು ಪ್ರಯಾಣಕ್ಕೆ ದುಬಾರಿಯಾಗುತ್ತಿದೆ ಎಂದಿದ್ದಾರೆ.
ಟೋಲ್ ಶುಲ್ಕ ಹೆಚ್ಚಳ:
ಬೆಂಗಳೂರಿಗೆ ಒಟ್ಟು ಏಳು ಕಡೆ ಸಂಪರ್ಕ ಕಲ್ಪಿಸುವ ನೈಸ್ ರಸ್ತೆಯಲ್ಲಿ ಶೇ.೧೩ ರಷ್ಟು ಟೋಲ್ ದರ ಹೆಚ್ಚಳವಾಗಿದೆ. ಕಳೆದ ವರ್ಷವಷ್ಟೇ ಶೇ.೧೭ ರಷ್ಟು ಟೋಲ್ ಹೆಚ್ಚಳ ಮಾಡಲಾಗಿತ್ತು. ಟೋಲ್ ರಿಯಾಯಿತಿ ಒಪ್ಪಂದ ಹಾಗೂ ಸರ್ಕಾರದ ಅಧಿಸೂಚನೆ ಅನ್ವಯ ದರ ಪರಿಷ್ಕರಣಗೆ ಅವಕಾಶ ನೀಡಲಾಗಿದೆ.
ವಿಶ್ವದರ್ಜೆಯ ಮೂಲಸೌಕರ್ಯವನ್ನು ಕಾಪಾಡಿಕೊಳ್ಳಲು ಮತ್ತು ವೆಚ್ಚಗಳನ್ನು ಪೂರೈಸಲು ಟೋರ್ ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ನೈಸ್ ಸಂಸ್ಥೆ ಹೇಳಿದೆ.
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಕಾರುಗಳಿಗೆ ೫೦ ರೂ, ಮತ್ತು ದ್ವಿಚಕ್ರ ವಾಹನಗಳಿಗೆ ೨೫ ರೂ, ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರುಗಳಿಗೆ ೪೦ ರೂ ಮತ್ತು ದ್ವಿಚಕ್ರ ವಾಹನಗಳಿಗೆ ೧೫ ರೂ ಪರಿಷ್ಕೃತ ಟೋಲ್ ಶುಲ್ಕ ವಿಧಿಸಲಾಗಿದೆ.
ಶಾಸಕರು ಭೇಟಿ:
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಪರಿಷ್ಕೃತ ಟೋಲ್ ಶುಲ್ಕ, ಶ್ರೀರಂಗಪಟ್ಟಣ ಹತ್ತಿರ ಟೋಲ್ ಸಂಗ್ರಹ ಮಾಡುವುದನ್ನು ಸರ್ವಿಸ್ ರಸ್ತೆ ಕಾಮಗಾರಿ ಮತ್ತು ಇತರ ಕೆಲಸಗಳು ಮುಗಿಯುವವರೆಗೆ ತಡೆ ಹಿಡಿಯಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಈ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಗಮನಕ್ಕೆ ತರುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.