ಕಲಬುರಗಿ,ಅ.10-ನಗರದ ಜಿಲ್ಲಾ ನ್ಯಾಯಾಲಯ ಸಮೀಪದ ಅರಣ್ಯ ಇಲಾಖೆ ಕಚೇರಿ ಮುಂದುಗಡೆ ಇರುವ ಬಾಲಾಜಿ ಟೀಸ್ಟಾಲ್ ಮತ್ತು ಆಲೂಬಾತ್ ಕೇಂದ್ರಕ್ಕೆ ಬೆಂಕಿ ಬಿದ್ದು ಸುಮಾರು 1 ಲಕ್ಷ ರೂ.ಮೊತ್ತದ ಅಕ್ಕಿ, ಬೇಳೆ ಸೇರಿದಂತೆ ಇತರೆ ದಿನಸಿ ಪದಾರ್ಥಗಳು ಸುಟ್ಟು ಕರಕಲಾಗಿವೆ.
ರಾತ್ರಿ ಕಿಡಗೇಡಿಗಳು ಟೀಸ್ಟಾಲ್ ಮತ್ತು ಆಲೂಬಾತ್ ಕೇಂದ್ರಕ್ಕೆ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವುದರ ಮೂಲಕ ಹೆಚ್ಚಿನ ಹಾನಿ ಮತ್ತು ಅನಾಹುತ ತಪ್ಪಿಸಿದ್ದಾರೆ.
ಈ ಸಂಬಂಧ ಅಂಗಡಿ ಮಾಲೀಕ ರಮೇಶ್ ಅವರು ಅಗ್ನಿಶಾಮಕ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.