
ತನಿಖೆ ಚುರುಕು
ಬೆಂಗಳೂರು,ಸೆ.೧೬-ಉದ್ಯಮಿಗೆ ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ರೂ ವಂಚನೆ ನಡೆಸಿರುವ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಹಲವು ಕಡೆಗಳಲ್ಲಿ ಮಹಜರು ನಡೆಸಿ ಹಾಲಶ್ರೀ ಕಾರು ಚಾಲಕನನ್ನು ಬಂಧಿಸಿ ಮೂರ್ಚೆರೋಗದಿಂದ ಚೇತರಿಸಿಕೊಂಡಿರುವ ಚೈತ್ರಾ ಕುಂದಾಪುರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.ಸಿಸಿಬಿ ವಿಚಾರಣೆ ವೇಳೆ ನಿನ್ನೆ ಕುಸಿದು ಬಿದ್ದಿ ಬಾಯಲ್ಲಿ ನೊರೆ ಬಂದು ಪ್ರಜ್ಞೆ ತಪ್ಪಿದ ಚೈತ್ರಾ ಕುಂದಾಪುರರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಆಕೆಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.ಪ್ರಕರಣದಲ್ಲಿ ೧.೫೦ಕೋಟಿ ಹಣ ಪಡೆದು ಹಲವೆಡೆ ಹೂಡಿಕೆ ಮಾಡಿ ತಲೆಮರೆಸಿಕೊಂಡಿರುವ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ ಅವರ ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ಆತ ವಿಚಾರಣೆ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ನಾಪತ್ತೆಯಾಗಿರುವ ಹಾಲಶ್ರೀ ಬಂಧನ ಕಾರ್ಯಾಚರಣೆ ಕೈಗೊಂಡಿದ್ದಾರೆ.ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ್ ಬಾಬುಗೆ ಬೈಂದೂರಿನ ಬಿಜೆಪಿ ಟಿಕೆಟ್ ಕೊಡಿಸಲು ಹಣ ಕೇಳಿದ್ದ ಆರೋಪವನ್ನು ತಳ್ಳಿ ಚ ಹಾಕಿದ್ದಾರೆ. ಡೀಲ್ ವಿಫಲವಾದ ನಂತರ ಹಣ ಮರುಪಾವತಿಗೆ ಸಮಯಾವಕಾಶ ಕೋರಿ ಬೆಂಗಳೂರಿನ ಅವರ ಕಚೇರಿಯಲ್ಲಿ ದೂರುದಾರರನ್ನು ಆಕೆ ಭೇಟಿಯಾಗಿದ್ದರು.
ಚೈತ್ರಾ ಕುಂದಾಪುರ ಮತ್ತು ಎಫ್ಐಆರ್ನಲ್ಲಿ ಹೆಸರಿಸಲಾದ ಇನ್ನೂ ಮೂವರು ಆರೋಪಿಗಳು ನಗರದ ಮಂಗಮ್ಮನಪಾಳ್ಯ ಕಚೇರಿಯಲ್ಲಿ ಪೂಜಾರಿ ಅವರನ್ನು ಭೇಟಿಯಾಗಿದ್ದು, ಅವರ ನಡುವಣ ಮಾತುಕತೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂರು ಕಡೆ ಮಹಜರು:
ಈ ನಡುವೆ ಪ್ರಕರಣ ನಡೆದ ಸ್ಥಳಗಳ ಮಹಜರು ನಡೆಸಲು ಈಗಾಗಲೇ ಮಂಗಳೂರಿಗೆ ತೆರಳಿರುವ ಅಧಿಕಾರಿಗಳು
ಉದ್ಯಮಿಯನ್ನು ಭೇಟಿಯಾದ ಜಾಗ, ಮಾತುಕತೆ ನಡೆದ ಜಾಗ ಹಾಗೂ ಹಣ ಪಡೆದ ಜಾಗಗಳ ಮಹಜರು ನಡೆಸಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಈಗಾಗಲೇ ವಂಚಕರ ಗ್ಯಾಂಗ್ ಉದ್ಯಮಿಯನ್ನು ಭೇಟಿಯಾದ ಬೆಂಗಳೂರಿನ ನಾರಾಯಣ ಗುರು ಕೋ ಅಪರೇಟಿವ್ ಬ್ಯಾಂಕ್, ಗೋವಿಂದ ಬಾಬು ಕಚೇರಿ ಹಾಗೂ ಕುಮಾರ ಕೃಪಾದಲ್ಲಿ ಸಿಸಿಬಿ ಪೊಲೀಸರು ಮಹಜರು ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಿಸಿಬಿ ಕಲೆಹಾಕಿದ್ದರು.
ನಕಲಿ ಪಾತ್ರಧಾರಿ:
ಕುಮಾರ ಕೃಪಾದಲ್ಲಿ ಆರೋಪಿಗಳು ಚೆನ್ನನಾಯ್ಕ್ ಹೆಸರಲ್ಲಿ ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿ ನಾಟಕವಾಡಿ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಬಂದಿದ್ದಾರೆ ಎಂದು ಕತೆ ಹೆಣೆದಿದ್ದರು.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್ ದಾಖಲಾಗಿದೆ. ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ ೨೦೧ನ್ನು ಹೊಸದಾಗಿ ಸೇರಿಸಿದ್ದಾರೆ.ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ.
೮ನೇ ಆರೋಪಿಗೆ ಡ್ರಿಲ್ :
ಆರೋಪಿಗಳ ನಡುವೆ ಹಣಕಾಸಿನ ವ್ಯವಹಾರ, ಸಂಪರ್ಕಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ಎದುರಿಸಿದ್ದ ಎಂಟನೇ ಆರೋಪಿ ಪ್ರಸಾದ್?ನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.ಆರೋಪಿ ಪ್ರಸಾದ್ ಬೈಂದೂರು ಉದ್ಯಮಿ ಗೋವಿಂದ ಬಾಬು ಪೂಜಾರಿ ಆಪ್ತರಾಗಿದ್ದಾರೆ. ಹಣಕಾಸಿನ ವ್ಯವಹಾರ, ಸಂಪರ್ಕಗಳಿಗೆ ಸಂಬಂಧಿಸಿದಂತೆ ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಪ್ರಸಾದ್?ನನ್ನು ಸಿಸಿಬಿ ಪೊಲೀಸರು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಡಿಯೋ ಬಹಿರಂಗ:
ವಂಚನೆ ಪ್ರಕರಣದ ಸಂಬಂಧ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಚೈತ್ರಾ ಮತ್ತು ಪ್ರಸಾದ್ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದಾಗ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ.
ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್
ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ೫ ಕೋಟಿ ರೂ. ಪಂಗನಾಮ ಹಾಕಿರುವ ಪ್ರಕರಣ ಕುರಿತಂತೆ ಚೈತ್ರಾಕುಂದಾಪುರ ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್ ದಾಖಲು ಮಾಡಲಾಗಿದೆ.ಬಂಡೇಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ ೨೦೧ ಹೊಸದಾಗಿ ಸೇರಿಸಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ ಕಳ್ಳಾಟ ಬಯಲಾಗಿದ್ದು, ತನಿಖೆಯಲ್ಲಿ ಶ್ರೀಕಾಂತ್ ಮೊಬೈಲ್ ನಾಶವಾಗಿರುವುದು ಬಹಿರಂಗವಾಗಿದೆ.
ಆರೋಪಿಗಳ ಮೊಬೈಲ್ಫೋನ್ ಜಾಲಾಡಿದ ಸಿಸಿಬಿಗೆ ಮೊಬೈಲ್ನಲ್ಲಿರುವ ದತ್ತಾಂಶ ನಾಶಪಡಿಸಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ನಾಶ ಆರೋಪದ ಮೇಲೆ ಮತ್ತೊಂದು ಸೆಕ್ಷನ್ ಸೇರ್ಪಡೆಮಾಡಲಾಗಿದೆ.
ವಂಚನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಶ್ರೀಕಾಂತ್ ಮತ್ತು ಚೈತ್ರಾ ನಡುವೆ ನಡೆದಿರುವ ಸಂಭಾಷಣೆಗಳನ್ನು ನಾಶಪಡಿಸಿರುವುದು ಬಹಿರಂಗವಾಗಿದೆ.