ಕೋಲ್ಕತ್ತಾ,ಜೂ.೨೭- ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಇನ್ನು ಕೆಲವು ದಿನ ಬಾಕಿ ಇರುವಾಗಲೇ ಟಿಎಂಸಿ -ಬಿಜೆಪಿ ಮಧ್ಯೆ ಮಾರಾಮಾರಿ ನಡೆದು ಆರು ಜನರಿಗೆ ಗುಂಡೇಟು ತಗುಲಿದೆ. ಓರ್ವ ಟಿಎಂಸಿ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಜುಲೈ ೮ ರಂದು ನಿಗದಿಯಾಗಿರುವ ಪಂಚಾಯತ್ ಚುನಾವಣೆಗೂ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾರಾಮಾರಿ ನಡೆದಿದ್ದು ಪಕ್ಷಗಳ ಜಿದ್ದಾಜಿದ್ದಿ ತಾರಕ್ಕೇರಿದೆ.ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ಬೀಕರಿಸಿರುವ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿ ಪಕ್ಷ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರ ಘರ್ಷಣೆ, ಗುಂಡೇಟು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ರಾಜಕೀಯಕ್ಕೆ ವೇದಿಕೆ ಮಾಡಿಕೊಟ್ಟಿದೆ.
ಈ ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕೂಚ್ ಬೆಹಾರ್ನ ದಿನ್ಹತಾ ಪೊಲೀಸ್ ಠಾಣೆ ವ್ಯಾಪ್ತಿಯ ಗಿಟಾಲ್ಡಾಹ್ನ ಜರಿಧರ್ಲಾ ಗ್ರಾಮದಲ್ಲಿ ನಸುಕಿನ ಜಾವ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ
ಜರಿಧರ್ಲಾ ಗ್ರಾಮ ಪಂಚಾಯಿತಿಯ ಪ್ರಕ್ಷುಬ್ಧ ಪ್ರದೇಶಕ್ಕೆ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿದೆ ಎಂದು ಕೂಚ್ ಬೆಹಾರ್ ಪೊಲೀಸ್ ವರಿಷ್ಠಾಧಿಕಾರಿ ಸುಮಿತ್ ಕುಮಾರ್ ತಿಳಿಸಿದ್ದಾರೆ.
ಎರಡು ಸ್ಥಳೀಯ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ನಡೆದ ಜಗಳದಲ್ಲಿ ಗುಂಡಿನ ಸದ್ದು ಮೊಳಗಿದೆ. ಈ ಘಟನೆಯ ಹಿಂದಿನ ಕಾರಣವನ್ನು ಇನ್ನು ತಿಳಿದುಬಂದಿಲ್ಲ. ಸ್ಥಳದಲ್ಲಿ ಪೊಲೀಸ್? ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಪ್ರದೇಶದಲ್ಲಿ ಈ ಘಟನೆ ಸಂಭವಿಸಿರುವುದು ಗಮನಾರ್ಹ..ಸ್ಥಳೀಯ ಮೂಲಗಳ ಪ್ರಕಾರ, ಆರು ವ್ಯಕ್ತಿಗಳು ಗುಂಡೇಟಿನಿಂದ ಗಾಯಗೊಂಡಿದ್ದರಿಂದ ಹಿಂಸಾಚಾರ ಮಾರಣಾಂತಿಕವಾಗಿದೆ ಎನ್ನಲಾಗಿದೆ.
ಬಿಜೆಪಿಯಿಂದ ಪ್ರಚೋದನೆ: ಟಿಎಂಸಿ ಆರೋಪ;.
ಬಿಜೆಪಿ ನಿರಂತರವಾಗಿ ನಮ್ಮನ್ನು ಪ್ರಚೋದಿಸುತ್ತಿದೆ ಮತ್ತು ಘರ್ಷಣೆಯಲ್ಲಿ ತೊಡಗಿದೆ ಎಂದು ಟಿಎಂಸಿ ಪಕ್ಷ ಆರೋಪಿಸಿದೆ.
ಬಿಜಪಿ ಪಕ್ಷದ ನಾಯಕರು ಜನರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ನಮ್ಮ ಜನರನ್ನು ಪ್ರಚಾರ ಮಾಡದಂತೆ ತಡೆಯುತ್ತಿದ್ದಾರೆ. ನಿನ್ನೆಯೂ ಅವರು ನಮ್ಮ ಮೇಲೆ ಅಪ್ರಚೋದಿತ ದಾಳಿ ನಡೆಸಿದರು ಮತ್ತು ನಮ್ಮ ನಿರಾಯುಧ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಐವರು ಗಾಯಗೊಂಡರು ಎಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್ ಮಾಡಿರುವ ಆರೋಪ ತಳ್ಳಿಹಾಕಿದ್ದು, ತೃಣಮೂಲ ಕಾಂಗ್ರೆಸ್ನ ಆಂತರಿಕ ಪೈಪೋಟಿಯಿಂದ ಈ ಘರ್ಷಣೆ ನಡೆದಿದೆ ಮತ್ತು ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.