ಹುಬ್ಬಳ್ಳಿ, ಜು 10: ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಇತರೆ ಯಾವುದೆ ತನಿಖಾ ಸಂಸ್ಥೆಗೆ ಕೊಡುವ ಅಗತ್ಯವಿಲ್ಲ. ನಮ್ಮ ಪೆÇಲೀಸ್ ಇಲಾಖೆಯವರು ತನಿಖೆಗೆ ಸಮರ್ಥರಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಇಲಾಖೆಯ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ಏನೆಂಬುದು ತಿಳಿದುಬರುತ್ತೆ. ಈ ನಿಟ್ಟಿನಲ್ಲಿ ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಹತ್ಯೆ ತನಿಖೆಯಲ್ಲಿ ತಾರತಮ್ಯದ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಘಟನೆ ನಡೆದಾಗ ಯಾರು ಕೂಡಾ ತಾರತಮ್ಯ ಮಾಡುವುದಕ್ಕೆ ಹೋಗುವುದಿಲ್ಲ. ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೆÇಲೀಸರು ಮಾಡುತ್ತಾರೆ. ಇದು ಸ್ವಾಭಾವಿಕವಾಗಿ ಆಗುವ ಪದ್ಧತಿ. ಅದರಲ್ಲಿ ತಾರತಮ್ಯದ ಪ್ರಶ್ನೆ ಬರುವುದಿಲ್ಲ ಎಂದರು.
ಘಟನೆ ನಡೆದ ಬಳಿಕ ಪೆÇಲೀಸರಿಗೆ ಮಾಹಿತಿ ತಿಳಿದು ದೂರು ಬಂದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಬೋರವೆಲ್ ನಲ್ಲಿ ಹಾಕಿದಂತ ದೇಹವನ್ನು ತೆಗೆಸಿ ಕ್ರಮ ಕೈಗೊಂಡಿದ್ದಾರೆ. ನಮ್ಮ ಇಲಾಖೆಗೆ ಅಭಿನಂದನೆ ಹೇಳುತ್ತೇನೆ ಎಂದರು.
ಹುಬ್ಬಳ್ಳಿಯ ವರೂರಿನ ಜೈನ್ ಮುನಿಗಳು ಉಪವಾಸ ಮಾಡಿದ್ದರು, ಈ ವಿಷಯಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಿನ್ನೆ ನಾನು ಮಾತನಾಡಿದ್ದೇನೆ. ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡುವುದಕ್ಕೆ ಬಂದಿದ್ದೇವೆ ಎಂದರು.
ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಒಳಜಗಳವಿದೆ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವುದಕ್ಕೆ ಅವರಿಗೆ ಆಗುತ್ತಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೇ ಸದನ ನಡಸುತ್ತಿರುವುದನ್ನು ನೋಡುತ್ತಿದ್ದರೆ ಅವರ ಅಂತರಿಕ ಜಗಳ ತೋರಿಸುತ್ತದೆ ಎಂದು ಜಿ.ಪರಮೇಶ್ವರ ನುಡಿದರು.