
ಕೋಲಾರ,ಮೇ.೫:ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಅಭಿವೃದ್ಧಿ ದಿಕ್ಕಿನತ್ತ ಹೋಗುತ್ತಿವೆ ಆದ್ದರಿಂದ ಜೆಡಿಎಸ್ ಪಕ್ಷವನ್ನು ಈ ಬಾರಿಗೆ ಗೆಲ್ಲಿಸಿ ಅಭಿವೃದ್ಧಿಗಾಗಿ ಕೈ ಜೋಡಿಸಿ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರೆ ಹಾಗೂ ಸ್ಟಾರ್ ಪ್ರಚಾರಕಿ ಯು.ಕೆ ಫರ್ಜಾನಾ ಮನವಿ ಮಾಡಿದರು.
ತಾಲೂಕಿನ ವಕ್ಕಲೇರಿ ಹೋಬಳಿ ಪಾಶ್ವಗಾನಹಳ್ಳಿ ಗೇಟ್ನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕರ್ನಾಟಕ ರಾಜ್ಯದ ಗೌರವವನ್ನು ಎತ್ತಿಹಿಡಿದ ಕೀರ್ತಿ ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ಸಲ್ಲಿಸುತ್ತದೆ ರಾಜ್ಯದ ಪ್ರತಿಯೊಬ್ಬರ ಶಾಂತಿ ನೆಮ್ಮದಿಗಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಅದರಿಂದಾಗಿ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಶಾಸಕರಾಗಿ ಆಯ್ಕೆಯಾಗುವಂತೆ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಾತಿ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ದಲಿತರನ್ನು ಬಡವರನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಈ ಎರಡು ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ನೆನಪಿಗೆ ಬರುತ್ತದೆ ಉಳಿದ ಸಂದರ್ಭದಲ್ಲಿ ಅವರಿಗೆ ನೆನಪಿಗೆ ಬರಲ್ಲ ಆದರೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದೇ ಹೋದರು ಪ್ರತಿಯೊಂದು ಜಾತಿ ಧರ್ಮಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದರು
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ರಾಜ್ಯದ ಜನ ಬೆಲೆಗಳ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ಈ ಬಗ್ಗೆ ಗಮನ ಹರಿಸಬೇಕಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಸರ್ವಜನಾಂಗೀಯ ತೋಟಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ರಾಜ್ಯದ ಜನರಿಗೆ ಏನು ಯೋಜನೆಗಳನ್ನು ಕೊಡುತ್ತೇವೆ ಎಂದು ಜನಗಳ ಮುಂದೆ ಹೇಳುವುದನ್ನ ಬಿಟ್ಟು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಂಡು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ತಿಳಿಸಿದರು.
ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷ ಬಣಕನಹಳ್ಳಿ ನಟರಾಜ್, ಒಕ್ಕಲಿಗ ಸಂಘದ ನಿರ್ದೇಶಕ ಡಾ.ಡಿ.ಕೆ ರಮೇಶ್, ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಮಾಹಿತಿ ಆಯೋಗದ ಮಾಜಿ ಆಯುಕ್ತ ಕೃಷ್ಣಮೂರ್ತಿ, ಯುವ ಜೆಡಿಎಸ್ ಮುಖಂಡ ಸಿಎಂಆರ್ ಹರೀಶ್, ಪಾಲಾಕ್ಷಗೌಡ, ಬಾಬು ಮೌನಿ, ದಿಂಬ ನಾಗರಾಜಗೌಡ, ಚಲುವನಹಳ್ಳಿ ನಾಗರಾಜ್, ವಡಗೇರಿ ರಮೇಶ್, ಅಶ್ವಥ್ ರಾಮ್, ಈರೇಗೌಡ ಇದ್ದರು.