
ಕೋಲಾರ,ಏ. ೧-ಜೆ.ಡಿ.ಎಸ್.ಪಕ್ಷದ ಸಂಘಟನೆಯಲ್ಲಿ ತೊಡಗಿರುವ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಜೆ.ಡಿ.ಎಸ್.ಪಕ್ಷದ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಹಾಗೂ ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿರುವ ಬಣಕನಹಳ್ಳಿ ನಟರಾಜ್ ಒಂದು ವಾರದಲ್ಲಿ ಸ್ಪಷ್ಟನೆ ನೀಡ ಬೇಕು, ಇಲ್ಲದೆ ಹೋದರೆ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಎಸ್.ಸಿ ಘಟಕದ ತಾಲ್ಲೂಕು ಅಧ್ಯಕ್ಷ ಹೆಚ್.ಎನ್.ಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆ.ಡಿ.ಎಸ್ ಪಕ್ಷದ ಎಸ್.ಸಿ.ಘಟಕದ ತಾಲ್ಲೂಕು ಅಧ್ಯಕ್ಷರನ್ನಾಗಿ ಕಳೆದ ಆರು ತಿಂಗಳ ಹಿಂದೆ ನನನ್ನು ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜ ರಾಜೇಶ್ವರಿ ಆಯ್ಕೆ ಮಾಡಿದ್ದರೂ, ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಹಾಗೂ ಪಕ್ಷದ ಚಟುವಟಿಕೆಗಳಿಗೆ ಕರೆಯದೆ ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರ ತಂದಿದೆ ಎಂದರು.
ನಾನಾಗಿ ಪಕ್ಷದಲ್ಲಿ ಪದವಿ ಬೇಕೆಂದು ಕೇಳಿದವನಲ್ಲ, ಅವರಾಗಿ ನನನ್ನು ಗುರುತಿಸಿ ಜವಾಬ್ದಾರಿ ನೀಡಿದ್ದರು,ನಾನು ಪಕ್ಷ ಸಂಘಟನೆ ಮಾಡುತ್ತಿದ್ದರೂ,ರಾಜಕೀಯವಾಗಿ ನನನ್ನು ಬಲಿಪಶು ಮಾಡುವ ಪ್ರಯತ್ನಕ್ಕೆ ಕಾರಣವೇನು ಎಂದು ನನಗೆ ಸ್ಪಷ್ಟನೆ ನೀಡಬೇಕು ಎಂದು ಹೆಚ್.ಎನ್.ಮೂರ್ತಿ ತಿಳಿಸಿದರು.
ಎಸ್.ಸಿ.ಘಟಕದ ಉಪಾಧ್ಯಕ್ಷ ಮುನಿಯಪ್ಪ, ಅಲ್ಪಸಂಖ್ಯಾತರು ಘಟಕದ ಶಭೀರ್, ಅಮ್ಮವಾರಿ ಪೇಟೆ ಬಾಬು ಇದ್ದರು.