
ಮೈಸೂರು: ಮಾ.27:- ಎಲ್ಲಿ ನೋಡಿದರೂ ಜನವೋ ಜನ ಸಂಪೂರ್ಣ ರಿಂಗ್ ರಸ್ತೆಯಲ್ಲಿ ವಾಹನಗಳ ದಟ್ಟಣೆ, ಕಾರ್ಯಕ್ರಮದಷ್ಟೇ ಹೊರಗು ನೆರದಿದ್ದ ಲಕ್ಷಾಂತರ ಜನಸ್ತೋಮದ ಐತಿಹಾಸಿಕ ಸಮಾರೋಪ ಸಮಾರಂಭ ಜೆಡಿಎಸ್ ಶಕ್ತಿ ಪ್ರದರ್ಶನವನ್ನು ಯಶಸ್ವಿಗೊಳಿಸಿತು.
ಸಮಾವೇಶಕ್ಕೆ ಬೆಳಿಗ್ಗೆ 11ಗಂಟೆಯಿಂದಲೇ ಕೋಲಾರ, ಉತ್ತರ ಕರ್ನಾಟಕ, ಬೆಂಗಳೂರು ಗ್ರಾಮಾಂತರ ಭಾಗದಿಂದ ಬಸ್ಗಳಲ್ಲಿ ಮಹಿಳೆಯರು ಬರಲಾರಂಭಿಸಿದರು. ಅದರಲ್ಲೂ ಹಾಸನ-ಮಂಡ್ಯ ಭಾಗದಿಂದ ಪೈಪೆÇೀಟಿ ಮೇರೆಗೆ ಬಸ್ಗಳ ಮೂಲಕ ಆಗಮಿಸಿದ್ದರು. ಉತ್ತನಹಳ್ಳಿರಿಂಗ್ ರಸ್ತೆಯಿಂದ ಬನ್ನೂರು ಮುಖ್ಯರಸ್ತೆಯ ದೇವೇಗೌಡ ವೃತ್ತದವರೆಗೂ ರಿಂಗ್ರಸ್ತೆಗಳಲ್ಲಿ ಬಸ್ ನಿಂತಿದ್ದವು. ಮತ್ತೊಂದೆಡೆ ದಟ್ಟಗಳ್ಳಿ ರಿಂಗ್ ರಸ್ತೆವರೆಗೂ ಬಸ್ಗಳು ನಿಂತಿದ್ದರಿಂದ ರಿಂಗ್ ರಸ್ತೆ ಸಂಪೂರ್ಣ ಬಂದ್ ಆಗಿದ್ದವು. ಬರೋಬ್ಬರಿ 13ಕ್ಕೂ ಹೆಚ್ಚು ಜಿಲ್ಲೆಯ ಲಕ್ಷಾಂತರ ಮಂದಿ ಸಮಾವೇಶಕ್ಕೆ ಸಾಕ್ಷಿಯಾದರು.
ಭಾವುಕರಾದ ಕ್ಷಣ: ಎಚ್.ಡಿ.ದೇವೇಗೌಡರ ಭಾಷಣ ಮುಗಿಸಿ ಅವರನ್ನು ಟ್ರಾಲಿಯ ಮೇಲೆ ಕೂರಿಸಿ ಎಚ್.ಡಿ.ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಮುಂದಕ್ಕೆ ಕರೆತಂದಾಗ ಇಡೀ ಕುಟುಂಬ ಜನರಿಗೆ ಕೈ ಮುಗಿದರು. ಈ ವೇಳೆ ಜನಸ್ತೋಮವೇ ಎದ್ದು ನಿಂತು ಜೆಡಿಎಸ್ಗೆ ಜಯಘೋಷ ಮೊಳಗಿಸುವ ಮೂಲಕ 15ನಿಮಿಷಗಳ ಕಾಲ ಇಡೀ ಸಮಾವೇಶ ಭಾವುಕತೆಗೆ ಒಳಗಾಯಿತು. ಜೆಡಿಎಸ್ ಉಳಿದಿರುವುದು ನಿಮ್ಮಂತಹ ಕಾರ್ಯಕರ್ತರಿಂದಲೇ ನನ್ನ ಮುಂದಿನ ಬದುಕು ಹಾಗೂ ಜೀವನವೂ ನಿಮಗಾಗಿಯೇ ಎಂದು ಸಮಾವೇಶದುದ್ದಕ್ಕೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜಯಘೋಷ ಮೊಳಗಿದವು.
ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಇಲ್ಲಿ ನೆರೆದಿರುವ ನೀವೇ ಕುಮಾರಣ್ಣ ನೀವೇ ದೇವೇಗೌಡರಾಗಿದ್ದಿರಿ. 1962ರಿಂದ ಇಲ್ಲಿಯವರೆಗೆ 61ವರ್ಷಗಳ ಕಾಲ ದಣಿವರೆಯದೇ ಈ ರಾಜ್ಯದಲ್ಲಿ ಒಂದು ರಾಷ್ಟ್ರೀಯ ಪಕ್ಷವನ್ನು ಜಯಪ್ರಕಾಶ್ ನಾರಾಯಣ್ರವರ ಜತೆಗೂಡಿ ದೇಶದಲ್ಲಿ ಕಟ್ಟಿದ್ದಾರೆ. ರೈತರ, ಬಡವರ, ದೀನ ದಲಿತರ ಸಮಾನತೆಗಾಗಿ ಪಕ್ಷ ತಂದಿದ್ದಾರೆ. ಪ್ರತಿಯೊಬ್ಬರಿಗೂ ಮೂರು ಹೊತ್ತು ಊಟ, ಶಿಕ್ಷಣ, ಆರೋಗ್ಯ ಹಾಗೂ ನೀರಾವರಿ ಯೋಜನೆ ಕಲ್ಪಿಸುವ ಕನಸುಗಾರರಾಗಿದ್ದಾರೆ. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಲೋಕೋಪಯೋಗಿ, ನೀರಾವರಿ ಸಚಿವರಾಗಿ ಖುಷ್ಕಿ ಜಮೀನಿಗೂ ನೀರು ಹರಿಸಿಬೇಕೆಂದು ಹಣ ಕೊಡಲಿಲ್ಲ ಎಂದು ರಾಜೀನಾಮೆ ಕೊಟ್ಟ ನಾಯಕರೂ ಇದ್ದರೆ ಅದು ನಮ್ಮ ದೇವೇಗೌಡರು ಎಂದರು.
ವಿರೋಧ ಪಕ್ಷದ ನಾಯಕರಾಗಿ ವಿಧಾನ ಮಂಡಲದಲ್ಲಿ ಗೋಪಾಲಗೌಡರನ್ನು ನೆನೆಪಿಸಿಕೊಳ್ಳುತ್ತಾರೆ. ದೇವೇಗೌಡರು ಮುಖ್ಯಮಂತ್ರಿ ಪದವಿಗೆ ಕೂಳಿತಾಗ ಜನತಾದರ್ಶನ ಪ್ರಾರಂಭಿಸಿದ್ದೇ ಮೈಸೂರಿನಿಂದ 18 ತಿಂಗಳು ಮುಖ್ಯಮಂತ್ರಿಯಾಗಿ 16ಲೋಕಸಭಾ ಸದಸ್ಯರನ್ನು ಜನತಾ ಪಕ್ಷದಿಂದ ಗೆಲ್ಲಿಸಿದ ಕೀರ್ತಿ ಅವರದ್ದಾಗಿದೆ. ಕಾಂಗ್ರೆಸ್ನಿಂದ ಜ್ಯೋತಿ ಬಾಸು, ಲಾಲೂಪ್ರಸಾದ್ ಯಾದವ್ ಮೊದಲಾದವರು ಸೇರಿ ದೇವೇಗೌಡರನ್ನು ಪ್ರಧಾನಿ ಮಾಡುತ್ತಾರೆ. ರೈತರ ನೀರಾವರಿಗೆ ಮೊದಲ 1600 ಕೋಟಿ ರೂ ಹಣ ಕೊಟ್ಟವರು ದೇವೇಗೌಡರು. ಕಬ್ಬು ಬೆಳೆಗಾರರನ್ನು ಉಳಿಸಿದ್ದು ದೇವೇಗೌಡರು. ತೊಗರಿ ಬೆಳೆ, ಕೃಷ್ಣ ನದಿ, ಹೆದ್ದಾರಿ ಯೋಜನೆಗಳು ಅಂದೆ ಮಾಡಿದ್ದರು ಎಂದು ಸ್ಮರಿಸಿದರು.
ವಿಧಾನ ಸಭೆಯಲ್ಲೇ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಹಾಗೂ ರಾಷ್ಟ್ರದಲ್ಲಿ ಆದರ್ಶ ನಾಯಕರಿದ್ದರೆ ದೇವೇಗೌಡರೇ ಎಂದು ಹೇಳಿದ್ದಾರೆ. ಹೀಗಾಗಿ ನಾವೆಲ್ಲರೂ ಅವರನ್ನೇ ಆದರ್ಶವಾಗಿರಿಸಿಕೊಂಡು ಮುನ್ನಡೆಯಬೇಕಿದೆ. ಸಿದ್ದರಾಮಯ್ಯನವರ ಆದಿಯಾಗಿ ಎಷ್ಟು ಮಂದಿ ಇದೇ ಪಕ್ಷದಿಂದ ಹೋಗಿ ಮಂತ್ರಿಯಾಗಿದ್ದಾರೆ. ಶಕ್ತಿಯುತವಾಗಿ ಬೆಳೆದು ಹೋಗಿದ್ದಾರೆ. ಬಸವರಾಜ ಬೊಮ್ಮಾಯಿ, ಅವರ ತಂದೆ, ಜೆ.ಎಚ್.ಪಟೇಲ್ ಯಾವ ಪಕ್ಷದಲ್ಲಿದ್ದರು. ಯಡಿಯೂರಪ್ಪ 80 ವರ್ಷದ ಮುಖ್ಯಮಂತ್ರಿಯಾಗಿ 40 ವರ್ಷ ಒಬ್ಬ ನಾಯಕರಿದ್ದರೆ ರಾಜ್ಯದಲ್ಲಿ ಆದರ್ಶ ರಾಜಕಾರಣಿ ದೇವೇಗೌಡರು ನಮಗೆ ಆದರ್ಶ ಎಂದು ಹೇಳಿದ್ದಾರೆ ಎಂದರು.
ಪ್ರಾದೇಶಿಕ ಪಕ್ಷ ಉಳಿಸಬೇಕು. ಕಾಂಗ್ರೆಸ್ ಸರ್ವನಾಶ ಆಗಿದೆ. ಬಿಜೆಪಿ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ದೇವೇಗೌಡರ ಆಸೆ ಇರುವುದು ರಾಜ್ಯವನ್ನು ಉಳಿಸಬೇಕು. 6.5 ಕೋಟಿ ಜನರನ್ನು ಉಳಿಸಲು ಪ್ರಾದೇಶಿಕ ಪಕ್ಷ, ರೈತ, ಕರುನಾಡಿನ ಪಕ್ಷವನ್ನು ಉಳಿಸಬೇಕೆಂಬ ಆಸೆಯಿದೆ. ಇದನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂಬ ನಿಮ್ಮ ಆಸೆಯನ್ನು ನಾವು ಮಾಡುತ್ತೇವೆಂದು ಹೇಳಿದ್ದೇವೆ. ಹಿಂದೆ ಪ್ರಧಾನಿ ಆದಾಗಲೂ ಗೀತಾರಾಮ್ ಕೇಸರಿಯವರು 10 ತಿಂಗಳಲ್ಲಿ ದೇವೇಗೌಡರನ್ನು ಇಳಿಸಿದರು. 12 ತಿಂಗಳ ಅವಧಿಯಲ್ಲಿ ಸಾಲಮನ್ನಾ ಮಾಡಿದರೂ ಎಂಬ ಕಾರಣಕ್ಕೆ ಅವರನ್ನು ಇಳಿಸಿದರು. ಈಗ ಚಾಮುಂಡೇಶ್ವರಿ ಕತ್ತಿ ಹಿಡಿದು ನಿಂತಿದ್ದಾಳೆ. ಅನ್ಯಾಯ ಮಾಡಿದವರನ್ನು ಬಿಡಲ್ಲ. 99 ದಿನದ ಪಾದಯಾತ್ರೆ ದಾಖಲೆ ಬರೆದಿದ್ದು, ನಿಮಗೇ ಬದುಕು ಕಟ್ಟಿಕೊಡಲು, ದೇವೇಗೌಡರನ್ನು ಉಳಿಸಲು ಜೆಡಿಎಸ್ ಗೆಲ್ಲಿಸಬೇಕಿದೆ. 55 ಲಕ್ಷ ಜನ ಬಾಗಿಯಾಗಿದ್ದು, 3ಕೋಟಿ ಜನ ನೋಡಿದ್ದಾರೆ. 5500 ಗ್ರಾಮಕ್ಕೆ ಭೇಟಿ ನೀಡಿದ್ದಾರೆ. 18 ತಾಸು ನಿರಂತರ ಪ್ರವಾಸ ಮಾಡಿದ್ದು, ರೈತರ ಬೆಳೆಗಳನ್ನೇ ಹಾರ ಮಾಡಿ ಹಾಕಿ ರೈತರು ಆಶೀರ್ವಾದ ಮಾಡಿದ್ದಾರೆ. ಹೀಗಿರುವಾಗ ನಿವೇಲ್ಲರೂ ಮುಖಂಡ ಮಾತನಾಡಿಸಿಲ್ಲ, ಎಂಎಲ್ಎ ನೋಡಿಲ್ಲ ಎನ್ನುವುದನ್ನು ಬಿಡಿ ಕುಮಾರಸ್ವಾಮಿ, ದೇವೇಗೌಡರೇ ಅಭ್ಯರ್ಥಿಗಳೆಂದು ಭಾವಿಸಿ ಮತ ಹಾಕಿ. ನಾಳೆಯಿಂದ ಪಂಚರತ್ನ ಯಾತ್ರೆ ನೀವೇ ಕೈಗೊಳ್ಳಬೇಕು ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸ್ವತಂತ್ರ, ಸ್ಪಷ್ಟ ಬಹುಮತದ ಸಂಪೂರ್ಣ ಬಹುಮತದ ಸರ್ಕಾರಕ್ಕಾಗಿ ಈ ಹೋರಾಟ ಮಾಡುತ್ತಿದ್ದೇನೆ. ಆರೂವರೆ ಕೋಟಿ ಜನರಿಗೆ ನನ್ನ ಮುಂದಿನ ಜೀವನ ಮೀಸಲಿಟ್ಟಿದ್ದೇನೆ. ಇಂದು ಶಪಥ ಮಾಡಿದ್ದೇನೆ. 123 ಸ್ಥಾನವನ್ನು ಆಶೀರ್ವಾದಲ್ಲಿ ಈ ನಾಡಿಗೆ ನೆಮ್ಮದಿ ತಾರದೇ ಇದ್ದರೆ ರಾಜಕೀಯದಲ್ಲಿ ಮುಂದುವರೆಯುವುದಿಲ್ಲ. ನಿಮ್ಮಿಂದ ಜನತಾದಳ ಪಕ್ಷ ಉಳಿದಿದೆ. ನಿಮ್ಮ ಆಶೀರ್ವಾದಿಂದ ಇದೊಂದು ಸಂಪೂರ್ಣ ಅವಕಾಶ ಕೊಡಿ ಎಂದರು.
ನನ್ನ ಪಂಚರತ್ನಯಾತ್ರೆಗೆ ಪ್ರಚಾರ ದೊರಕಲಿಲ್ಲಿ. ಋಣ ಮುಕ್ತ ಕಾಯಿದೆ ಬಿಜೆಪಿ ಕಸದ ಬುಟ್ಟಿಗೆ ಹಾಕಿತು. ದೇವೇಗೌಡರ ಕೊಡುಗೆಯಿಂದಲೇ ಕೃಷ್ಣಮೇಲ್ದಂಡೆ ಯೋಜನೆ ಜಾರಿಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ 15ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ನೀಡಿದ್ದೇವೆ. ನನ್ನ ಶಪಥ ಈಡೇರಬೇಕು ಅಲ್ಲಿಯವರೆಗೂ ದೇವೇಗೌಡರೂ ಜೀವಂತವಾಗಿ ಇರಬೇಕೆಂದು ಕೇಳಿಕೊಳ್ಳುತ್ತೇನೆ. ಜಾತಿಯ ವ್ಯಾಮೋಹದಲ್ಲಿ ಜನತಾದಳವನ್ನು ಮರೆಯುತ್ತಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು ಈಗ ಉತ್ತರ ಕರ್ನಾಟಕದ ನಿಮ್ಮ ಹಳ್ಳಿ ನೋಡಿದ್ದೇನೆ. ನಿಮ್ಮ ಬದುಕಿಗೆ ಐದು ವರ್ಷದ ಅವಧಿಗೆ ಸರ್ಕಾರ ಕೊಡುವ ತೀರ್ಮಾನ ಮಾಡಿದರೆ ನಿಮ್ಮ ಅಭಿವೃದ್ಧಿಗೆ ಕಾಯುತ್ತೇನೆಂದರು.
ಹಾಸನ, ಮಂಡ್ಯ, ಮೈಸೂರು ಜಿಲ್ಲೆ ಭದ್ರ ಕೋಟೆಯನ್ನು ಛಿದ್ರ ಮಾಡುತ್ತೇನೆಂದು ನಿತ್ಯ ಮಾದ್ಯಮಗಳ ಮೂಲಕ ಬಿಜೆಪಿ ಬೊಬ್ಬೆರುತ್ತಿದೆ. ಈ ಬಾರಿ ನನ್ನ ನೆಲೆದಲ್ಲಿಯೂ ನನ್ನ ಕೈ ಹಿಡಿಯುತ್ತಿರಿ. ಜತೆಗೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ, ತುಮಕೂರು ಸೇರಿ ಉತ್ತರ ಕರ್ನಾಟಕದಲ್ಲೂ ಆಶೀರ್ವದಿಸುವ ಭರವಸೆಯಿದೆ. ರಾಜಕೀಯ ಸನ್ನಿವೇಶದಿಂದ ಎರಡು ಬಾರಿ ಮುಖ್ಯಮಂತ್ರಿ ಆದೆ ಆದರೂ ಹಣ ಸಂಪಾದಿಸಿಲ್ಲ. ತೆರಿಗೆ ಲೂಟಿ ಮಾಡಲಿಲ್ಲ. ನಿಮ್ಮ ಅಭಿವೃದ್ಧಿಗಾಗಿ ಅವಕಾಶ ಕೇಳುತ್ತಿದ್ದೇನೆ. ಈಗ ಯಾವ ಮೀಸಲಾತಿ ಕೊಟ್ಟು ಎನೂ ಪ್ರಯೋಜನ. ಅದರಿಂದ ಆಗಿರುವ ಲಾಭವಾದರೂ ಎನೂ ಪ್ರತಿಯೊಂದು ಕೆಲಸಕ್ಕೂ ಲಕ್ಷ ಲಕ್ಷ ಲಂಚ ಕೊಡಬೇಕಾದ ಸನ್ನಿವೇಶ ಸೃಷ್ಠಿಯಾಗಿದೆ ಎಂದರು.
ರೈತರು, ಕೃಷಿಯೇತರರು ಹಾಗೂ ಎಂಟು ತಾಸುಗಳ ವಿದ್ಯುತ್ ಸೇರಿ ನಾನಾ ಬೇಡಿಕೆಗಳಿಗೆ ನನ್ನ ಪಂಚರತ್ನ ಯಾತ್ರೆ ಉತ್ತರವಾಗಲಿದೆ ಆಶೀರ್ವದಿಸಿ ಎಂದರು.