ಸಂಜೆವಾಣಿ ನ್ಯೂಸ್
ಮೈಸೂರು, ಜೂ.30:- ಯತಿವರೇಣ್ಯ ಸಮಾಜ ಸುಧಾರಕರೆಂದು ಹೆಸರುವಾಸಿಯಾದ ಪರಮಪೂಜ್ಯ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಕರಕಮಲ ಸಂಜಾತರಾದ ಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಗುರುಗಳು ನಡೆದುಕೊಂಡು ಬಂದಿದ್ದದಾರಿಯಲ್ಲೇ ಸಾಗುತ್ತ, ತಮ್ಮ ಗುರುಗಳು ಪ್ರಾರಂಭಿಸಿದ್ದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು, ವಿದ್ಯಾಶಾಲೆಗಳನ್ನು, ವಿದ್ಯಾರ್ಥಿನಿಲಯಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ದೇಶದ ಎಲ್ಲೆಡೆಗಳಲ್ಲಿರುವ ತಮ್ಮಎಲ್ಲಾ ಸಂಸ್ಥೆಗಳ ಮೇಲ್ವಿಚಾರಣೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಜನಪ್ರಿಯರಾಗಿದ್ದಾರೆ. ಆಯೋಧ್ಯೆಯ ಶ್ರೀ ರಾಮನ್ಯಾಸ ಸಮಿತಿಯ ಸದಸ್ಯರಾಗಿ ಆಯೋಧ್ಯೆಯ ಶ್ರೀ ರಾಮಮಂದಿರದ ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಯತಿಗಳು ಪ್ರತೀ ವರ್ಷವೂ ಪಾಲನೆ ಮಾಡಿಕೊಂಡು ಬರುತ್ತಿರುವ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಮೈಸೂರು ನಗರದಲ್ಲಿ ನಡೆಸಲು ಉದ್ದೇಶಿಸಿರುವುದು ಮೈಸೂರಿನ ಜನತೆಗೆ ಸಂತಸತಂದಿದೆ ಎಂದು ಗೌರವ ಅಧ್ಯಕ್ಷರಾದ ಆರ್ ವಾಸುದೇವ್ ಭಟ್ ತಿಳಿಸಿದರು
ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಇದೇ ಜುಲೈ ತಿಂಗಳು 3ನೇ ತಾರೀಖು ಅಂದರೆ ಆಷಾಡ ಶುಕ್ಲಪಕ್ಷ ಹುಣ್ಣಿಮೆ ಯಿಂದ ಸೆಪ್ಟೆಂಬರ್ ತಿಂಗಳು 20ನೇ ತಾರೀಕು ಅಂದರೆ, ಭಾದ್ರಪದ ಶುಕ್ಲ ಚತುರ್ದಶಿಯವರೆಗೆ 90 ದಿನಗಳ ಚಾತುರ್ಮಾಸ್ಯ ವ್ರತವನ್ನು ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಕೈಗೊಂಡು ಶ್ರೀಕೃಷ್ಣ, ರಾಮವಿಠಲ ದೇವರ ಪೂಜೆ, ಜಪ, ತಪ ಅನುಷ್ಠಾನಗಳಿಂದ ಮೈಸೂರು ನಗರದ ಭಕ್ತ ಜನತೆಯನ್ನು ಅನುಗ್ರಹಿಸಲಿದ್ದಾರೆ. ತಾ. 02.07.2023 ಭಾನುವಾರ ಸಾಯಂಕಾಲ ಮೈಸೂರು ನಗರಕ್ಕೆ ಆಗಮಿಸಲಿರುವ ಶ್ರೀ ಶ್ರೀಗಳನ್ನು ಸರಸ್ವತಿ ಪುರಂನಲ್ಲಿರುವ ಅಗ್ನಿರಾಮಕ ದಳ ವೃತ್ತದಲ್ಲಿ ಸ್ವಾಗತಿಸಿ ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಸ್ವಾಗತಿಸಲಾಗವುದು.
ಈ ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆವಾದನ, ಭಕ್ತರಿಂದ ಭಜನೆ, ವೇದಘೋಷ ಮತ್ತು ಕೀಲುಕುದುರೆ, ಡೊಳ್ಳು ಕುಣಿತ, ಕಂಸಾಳೆ ಇತ್ಯಾದಿ ಕಲಾ ಪ್ರಾಕಾರಗಳು ಮೆರಗನ್ನು ನೀಡಲಿವೆ. ಶ್ರೀ ಶ್ರೀಗಳನ್ನು ಶ್ರೀ ಕೃಷ್ಣಧಾಮದಲ್ಲಿ ಸ್ವಾಗತಿಸಿದ ಬಳಿಕ ಶ್ರೀಕೃಷ್ಣ ಸಭಾ ಭವನದಲ್ಲಿ 5 ಗಂಟೆಯಿಂದ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಜರಾದ ಯದುವೀರಕೃಷ್ಣದತ್ತಚಾಮರಾಜಒಡೆಯರ್ ರವರುಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಕೃಷ್ಣರಾಜಕ್ಷೇತ್ರದ ಶಾಸಕರಾದ ಶ್ರೀ ಟಿ. ಎಸ್, ಶ್ರೀವತ್ಸ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಾಮರಾಜಕ್ಷೇತ್ರದ ಶಾಸಕರಾದ ಶ್ರೀ ಕೆ.ಹರೀರಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೈಸೂರು ನಗರದ ಗಣ್ಯವ್ಯಕ್ತಿಗಳೆಲ್ಲಾ ಈ ಸಮಾರಂಭದಲ್ಲಿ ಭಾಗವಹಿಸಲಿದ್ದು ಮೈಸೂರು ನಗರದಎಲ್ಲಾ ಮಾನ್ಯ ಪತ್ರಕರ್ತರನ್ನು, ಟಿ.ವಿ. ಮಾಧ್ಯಮದವರ ತುಂಬು ಹೃದಯದ ಸಹಕಾರವನ್ನು ಬಯಸುತ್ತೇವೆ. ಪೂಜ್ಯ ಶ್ರೀಪಾದರು ಶ್ರೀ ಕೃಷ್ಣಧಾಮದಲ್ಲಿದ್ದು ಕೊಂಡು ತಮ್ಮ ದೈನಂದಿನದ ವ್ಯಾಯಾಮ, ವಿದ್ಯಾರ್ಥಿಗಳಿಗೆ ಪಾಠ, ಜಪ, ತಪ, ಪೂಜೆಅಲ್ಲದೆ, ಬೆಳಗಿನ ಹೊತ್ತು ಭಕ್ತರ ಮನೆಗಳಿಗೆ ಪಾದಪೂಜೆಗಾಗಿ ತೆರಳುತ್ತಾರೆ. ಮಧ್ಯಾಹ್ನದ ಮಹಾ ಪೂಜೆಯ ನಂತರ ಭಿಕ್ಷೆ ಹಾಗೂ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಲಿದ್ದಾರೆ.
ಶ್ರೀ ಶ್ರೀಗಳು ಶ್ರೀ ಕೃಷ್ಣಧಾಮ ಮಾತ್ರವಲ್ಲದೆ ಜಯಲಕ್ಷ್ಮೀಪುರಂನ ರಾಯರಮಠ, ಉದಯಗಿರಿಯ ಶ್ರೀರಾಮಧಾಮ, ಜೆ.ಪಿ.ನಗರದ ವಿಠಲಧಾಮ, ಅಗ್ರಹಾರದ ಉತ್ತರಾಧಿಮಠ, ಉಡುಪಿ ಶ್ರೀ ಕೃಷ್ಣಮಂದಿರ, ಕೃಷ್ಣಮೂರ್ತಿಪುರಂನ ವ್ಯಾಸರಾಯ ಮಠ, ಚಾಮರಾಜರಸ್ತೆಯ ವೆಂಕಟಾಚಲಧಾಮ, ಟಿ.ಕೆ.ಲೇಔಟ್ನ ರಾಯರ ಮಠ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಆಸ್ಥಾನ ಪೂಜೆಯನ್ನು ಕೈಗೊಳ್ಳಲಿದ್ದಾರೆ. ಶ್ರೀ ಶ್ರೀಗಳು ತಮ್ಮ 40ನೇ ಪರ್ವದಲ್ಲಿ ನಡೆಸುತ್ತಿರುವ ಈ ಚಾತುರ್ಮಾಸ್ಯ ವ್ರತದಲ್ಲಿ ದೇವರ ಪೂಜೆ, ಪ್ರವಚನಗಳಿಗೆ ಮಾತ್ರ ಸೀಮಿತಗೊಳಿಸದೆ, ಸಾಮಾಜಿಕ ಕಾರ್ಯಕ್ರಮಗಳನ್ನೂ ಕೂಡ ಭಾಗವಹಿಸಲಿದ್ದಾರೆ. ವಿವಿಧ ವಿದ್ಯಾಕೇಂದ್ರಗಳನ್ನು ಸಂದರ್ಶಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ, ದೀನ ದಲಿತರ ಕೇರಿಗಳ ಸಂದರ್ಶನ ಹಾಗೂ ಆಶೀರ್ವಚನ, ಆಸತ್ರೆ, ವೃದ್ಧಾಶ್ರಮ ಇತ್ಯಾದಿಗಳನ್ನು ಸಂದರ್ಶಿಸಿ ಹೆಣ್ಣು ಹಂಪಲು ವಿತರಣೆ ಮುಂತಾದ ಧರ್ಮ ಕಾರ್ಯಗಳನ್ನು ನಡೆಸಲಿದ್ದಾರೆ.
90 ದಿನಗಳ ಪರ್ಯಂತ ನಡೆಯುವ ಈ ಉತ್ಸವದಲ್ಲಿ ಪ್ರತೀದಿನ ಕೃಷ್ಣಧಾಮದಲ್ಲಿ ಸಾಯಂಕಾಲ 5 ರಿಂದ 8.30 ವರೆಗೆ ಭಜನೆ, ವಿದ್ವಾಂಸರಿಂದ ಭಾಗವತ ಪ್ರವಚನ, ಶ್ರೀ ಶ್ರೀಗಳಿಂದ ಸಮಗ್ರ ರಾಮಯಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣಧಾಮದಲ್ಲಿ 90 ದಿನಗಳ ಪರ್ಯಂತ ಪ್ರತೀ ದಿನ ಸಾಯಂಕಾಲ 5.00 ಗಂಟೆಯಿಂದ 8.00 ಗಂಟೆಯವರೆಗೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದ ವಿತರಣೆಯನ್ನು ಆಯೋಜಿಸಲಾಗಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಲು ಉತ್ಸುಕರಾದ ಶ್ರೀಗಳಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಹೀಗೆ ಈ ಚಾತುರ್ಮಾಸ್ಯ ಕಾಲದಲ್ಲಿ ಪರಮ ಪೂಜ್ಯ ಶ್ರೀ ಗಳಿಂದ ಮೈಸೂರಿನ ಜನತೆಗಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ.
ಮೈಸೂರಿನ ಸಹೃದಯ ವಾರ್ತಾ ಪತ್ರಿಕೆ ಪ್ರತಿನಿಧಿಗಳು ಹಾಗೂ ದೂರದರ್ಶನ ಮಾಧ್ಯಮದವರ ಪೂರ್ಣ ಸಹಕಾರವನ್ನು ಬಯಸುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ಸಮಿತಿಯ ವಿದ್ವತ್ ಸಮಿತಿಯ ಅಧ್ಯಕ್ಷರಾದ ಬೆನಾ ವಿಜೇಂದ್ರ ಚಾರ್ಯ, ಸಮಿತಿಯ ಗೌರವಾಧ್ಯಕ್ಷರು ಆರ್ ವಾಸುದೇವ್ ಭಟ್, ಅಧ್ಯಕ್ಷರು ಎಂ ಕೃಷ್ಣ ದಾಸ್ ಪುರಾಣಿಕ್, ಕಾರ್ಯಧ್ಯಕ್ಷರು ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್ ತಂತ್ರಿ, ಪ್ರಚಾರ ಸಮಿತಿಯ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಹಾಜರಿದ್ದರು.