
ಕಲಬುರಗಿ:ಮೇ.22: ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ-ಮರಗಳು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳು ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿಗಳಾಗಿದ್ದು, ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದ್ದು, ಇದರಿಂದ ಪರಿಸರ ಸಮಲೋಲನೆ ಸಾಧ್ಯವಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಎಸ್.ಟಿ.ಬಿ.ಟಿ. ಕ್ರಾಸ್ ಸಮೀಪವಿರುವ ಮಾತೋಶ್ರೀ ಮಹಿಳಾ ಪದವಿ ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಜೀವವೈವಿಧ್ಯ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೀವವೈವಿಧ್ಯ ಸಮೃಧವಾಗಿರುವ ಸ್ಥಳಗಳನ್ನು ಸಂರಕ್ಷಿಬೇಕು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವ ಕಾರ್ಯ ಜರುಗಬೆಕು. ಪ್ಲಾಸ್ಟಿಕ್, ರಸಗೊಬ್ಬರ, ಹಾನಿಕಾರಕ ರಾಸಾಯನಿಕಗಳ ಬಳಕೆ ತಗ್ಗಿಸುವುದು, ವಿವಿಧ ಮಾಲಿನ್ಯಗಳನ್ನು ತಡೆಗಟ್ಟುವುದು, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವುದು, ಸಾವಯುವ ಬೇಸಾಯ ಹೆಚ್ಚಳಗೊಳಿಸುವುದು, ಗಿಡ-ಮರಗಳು, ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಬಹುದಾಗಿದೆ ಎಂದರು.
ಪ್ರಾಚಾರ್ಯ ಡಾ.ಶಿವಶಂಕರ ಬಿ.ಪೂಜಾರಿ ಮಾತನಾಡಿ, ಜಗತ್ತಿನ ಸಕಲ ಜೀವರಾಶಿಗಳಿಗೆ ಪರಿಸರವೇ ಆವಾಸ ಸ್ಥಾನವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಜೀವಿಗಳು ಪೂರಕವಾಗಿ ಸಂಬಂಧ ಹೊಂದಿರುತ್ತವೆ. ಪರಿಸರ ಸಮತೋಲನದಲ್ಲಿರಲು ಜೀವರಾಶಿಗಳು ಸಮತೋಲನವಾಗಿರಬೇಕು. ಅಂದಾಗ ಎಲ್ಲಾ ಜೀವಿಗಳು ಬದುಕಿ, ಬಾಳಲು ಸಾಧ್ಯವಿದೆ. ಆದರೆ, ಪ್ರಸ್ತುತ ಸನ್ನಿವೇಶಗಳಲ್ಲಿ ಅನೇಕ ಜೀವಿಗಳು ನಾಶ ಹೊಂದಿವೆ ಮತ್ತು ಇನ್ನು ಕೆಲವು ಅಳಿವಿನ ಅಂಚಿನಲ್ಲಿವೆ. ಆದ್ದರಿಂದ ಪರಿಸರದಲ್ಲಿ ಏರು-ಪೇರಾಗಿ ಪರಿಸರ ಸಂಬಂಧಿ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸಂಗೀತಾ ಮೆನ್ಸೆ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಂಜಯ್ ಜಾಧವ ಸೇರಿದಂತೆ ಇನ್ನಿತರರಿದ್ದರು.