ಜೀವನದ ಪಯಣ ಮುಗಿಸಿದ ಧ್ರುವನಾರಾಯಣ

ಚಾಮರಾಜನಗರ, ಮಾ.13- ನಾಡಿನ ಧೀಮಂತ ನಾಯಕ, ರಾಜಕಾಣರದಲ್ಲಿದ್ದ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಆರ್. ಧ್ರುವನಾರಾಯಣ ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನೆಚ್ಚಿನ ನಾಯಕನನ್ನು ಕಳೆದುಕೊಂಡ ಖಾಲಿತನ, ಪಕ್ಷದ ಗೆಳೆಯನನ್ನು ಕಳೆದುಕೊಂಡ ಬೇಸರ ಹೀಗೆ ನೂರಾರು ದುಃಖ ಹೊತ್ತ ಸಾವಿರಾರು ಕಣ್ಣುಗಳು ಕಂಬನಿ ಹಾಕುತ್ತ ರಾಜಕೀಯ ಧ್ರುವತಾರೆಯನ್ನು ಭಾರದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು. ಶನಿವಾರ ತಡರಾತ್ರಿ ಚಾಮರಾಜನಗರಕ್ಕೆ ಪಾರ್ಥಿವ ಶರೀರ ಆಗಮಿಸಿತು. ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹುಟ್ಟೂರಿಗೆ ಪಾರ್ಥಿವ ಶರೀರ ತಂದು ಡಾ. ಬಿ.ಆರ್. ಅಂಬೇಡ್ಕರ್ ಭವನ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹಳ್ಳಿ-ಹಳ್ಳಿಗಳಿಂದ ಬಂದ ಜನಸಾಗರ:ಅಜಾತಶತ್ರು, ಸಜ್ಜನ ರಾಜಕಾರಣಿ ಹಾಗೂ ಜನನಾಯಕನಿಗೆ ಅಂತಿಮ ನಮನ ಸಲ್ಲಿಸಲು ಹಳ್ಳಿಗಳಿಂದ ಜನರು ಆಟೋ, ಪಿಕ್‍ಅಪ್ ವಾಹನಗಳನ್ನು ಮಾಡಿಕೊಂಡು ತಂಡೊಪತಂಡವಾಗಿ ಬಂದು ಅಂತಿಮ ನಮನ ಸಲ್ಲಿಸಿದರು.
ಬಿಕ್ಕಿ-ಬಿಕ್ಕಿ ಅತ್ತ ಡಿಕೆಶಿ:
ಅಂತಿಮ ನಮನ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡು, ಪುತ್ರ ದರ್ಶನ ಭುಜ ತಟ್ಟಿ ಸಮಾಧಾನ ಪಡಿಸಿ ಸಿದ್ದರಾಮಯ್ಯ ಅಂತಿಮ ವಿಧಿ-ವಿಧಾನದ ಬಗ್ಗೆ ಮಾಹಿತಿ ಪಡೆದರು. ನಂತರ, ಡಿಕೆಶಿ ಕಾಂಗ್ರೆಸ್ ಧ್ವಜವನ್ನು ಪಾರ್ಥಿವ ಶರೀರದ ಮೇಲೆ ಹೊದಿಸಿ ಬಿಕ್ಕಿ-ಬಿಕ್ಕಿ ಅತ್ತರು. ಕಾಂಗ್ರೆಸ್ ನಾಯಕರುಗಳು ಕುಟುಂಬಸ್ಥರಿಗೆ ಸಮಾಧಾನ ಪಡಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಸರ್ಕಾರಿ ಗೌರವ :
ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಮಾಜಿ ಸಂಸದ ಧುವನಾರಾಯಣ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಚಾಮರಾಜನಗರ ಪೆÇಲೀಸ್ ಇಲಾಖೆಯು ಗಾಳಿಗೆ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿತು. ಜಿಲ್ಲಾಡಳಿತ ವತಿಯಿಂದ ಪೆÇಲೀಸ್ ವರಿμÁ್ಠಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ಶಾಸಕರುಗಳು ಪುಷ್ಪಮಾಲೆ ಅರ್ಪಿಸಿ ಅಂತಿಮ ಗೌರವ ಸಲ್ಲಿಸಿದರು.
ತಂದೆ-ತಾಯಿ ಪಕ್ಕ ಸಮಾಧಿ :
ಧ್ರುವನಾರಾಯಣ ಅವರ ತಂದೆ-ತಾಯಿ ಸಮಾಧಿ ಪಕ್ಕವೇ ಧ್ರುವ ಅವರ ಅಂತ್ಯಕ್ರಿಯೆ ನಡೆಯಿತು. ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಕುರ್ಜು ಕಟ್ಟಿ ಧ್ರುವ ಅವರ ಅಂತಿಮ ಮೆರವಣಿಗೆ ನಡೆಸಿ ಬಳಿಕ ಮಣ್ಣು ಮಾಡಲಾಯಿತು.
ಪತ್ನಿ ವೀಣಾ ಮಕ್ಕಳಾದ ದರ್ಶನ್, ಧೀರನ್ ಶೋಕ ಸಾಗರದಲ್ಲಿ ಮುಳುಗಿದ್ದರು. ಧ್ರುವನಾರಾಯಣ ಅವರ ಪಾರ್ಥಿವ ಶರೀರಕ್ಕೆ ಡಿ.ಕೆ. ಶಿವಕುಮಾರ್ ಹೆಗಲು ಕೊಟ್ಟು ಮೂರು ಸುತ್ತು ಸುತ್ತಿದರು.
ಪುತ್ರ ದರ್ಶನ್ ಟಿಕೆಟ್ ಕೊಡಬೇಕೆಂದು ಒತ್ತಾಯ :
ಹೆಗ್ಗವಾಡಿ ಗ್ರಾಮದಲ್ಲಿ ಇಂದು ಧ್ರುವನಾರಾಯಣ ಅಂತ್ಯಕ್ರಿಯೆ ನಡೆಯುವ ವೇಳೆ ಅಭಿಮಾನಿಗಳು ದೊಡ್ಡ ಹೈಡ್ರಾಮವನ್ನೇ ಸೃಷ್ಟಿ ಮಾಡಿದ್ದರು. ಧ್ರುವನಾರಾಯಣ ಅವರ ಹಿರಿಯ ಪುತ್ರ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಟಿಕೆಟ್ ಕೊಡಬೇಕೆಂದು ಒಂದೇ ಸಮನೆ ಘೋಷಣೆಗಳನ್ನು ಕೂಗಿದರು.
ಬೇಕೇಬೇಕು ಟಿಕೆಟ್ ಬೇಕು ಎಂಬಿತ್ಯಾದಿ ಘೋಷಣೆ ಕೂಗಿದ ಕಾರ್ಯಕರ್ತರು: ಧ್ರುವಅವರ ಟಿಕೆಟ್ ಅನ್ನು ಅವರ ಮಗನಿಗೆ ಕೊಡಬೇಕೆಂದು ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ಘೋಷಣೆ ಕೂಗಿದರು. ಸಿದ್ದರಾಮಯ್ಯ, ಡಿಕೆಶಿ, ಪರಂ ಕೈ ಮುಗಿದು ಸಮಾಧಾನದಿಂದ ಇರುವಂತೆ ಮನವಿ ಮಾಡಿದರೂ ಸುಮ್ಮನಾಗದ ಕಾರ್ಯಕರ್ತರು ಟಿಕೆಟ್‍ಗೆ ಒತ್ತಾಯಿಸಿ ಘೋಷಣೆ ಕೂಗಿದರು. ಅಂತಿಮಕ್ರಿಯೆ ವೇಳೆಯೂ ದರ್ಶನ್ ಮುಂದಿನ ಎಂಎಲ್‍ಎ, ಬೇಕೆ ಬೇಕು ಟಿಕೆಟ್ ಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಕೈ ಮುಖಂಡರುಗಳಾದ ಸಲೀಂ ಅಹ್ಮದ್, ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ವಿಶ್ವನಾಥ್, ರೋಜಿ ಜಾನ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.