
ವಿಜಯಪುರ: ಆ.20:ಐತಿಹಾಸಿಕ ವಿಜಯಪುರ ನಗರದಲ್ಲಿ ಪುರಾತನ ದೇವಾಲಯಗಳಿಗೆ ಕೊರತೆ ಏನಿಲ್ಲ. ಕೆಲವು ಅಭಿವೃದ್ಧಿ ಹೊಂದಿ ಭಕ್ತರ ಮನತಣಿಸುವಲ್ಲಿ ಯಶ ಕಂಡಿದ್ದರೆ, ಇನ್ನೂ ಕೆಲವು ದುಸ್ಥಿತಿಯಲ್ಲಿಯೇ ಇದ್ದು, ಅವುಗಳ ಜೀರ್ಣೊದ್ಧಾರ ಕಾರ್ಯ ಆಗಬೇಕಿದೆ.
ಅಂತಹುಗಳಲ್ಲಿ ನಗರದ ಜುಮ್ಮಾ ಮಸೀದಿ ರಸ್ತೆಯ ಝಂಡಾ ಕಟ್ಟಾ ಬಳಿಯ ಹಳಕೇರಿ ಗಲ್ಲಿಯ ಗಾಯಿ ಚಾಳದಲ್ಲಿರುವ ಪುರಾತನ ಶ್ರೀ ನೀಲಕಂಠೇಶ್ವರ ದೇವಾಲಯವೂ ಒಂದಾಗಿದೆ.
ಸರಕಾರಿ ದಾಖಲೆಗಳ ಪ್ರಕಾರ ಈ ದೇವಾಲಯವು ಬಾಳಂಭಟ್ಟ ನಾರಾಯಣ ಭಟ್ಟ ಅಕ್ಷಂತಿ ಎಂಬುವವರ ಪಿತ್ರಾ ರ್ಜಿತ ಆಸ್ತಿ ಎಂದು ಹೇಳುತ್ತದೆ. ಸಧ್ಯ ಅಕ್ಷಂತಿ ಕುಟುಂಬದ ಸದಸ್ಯರಾರೂ ದೇವಾಲಯದ ಬಳಿ ವಾಸವಾಗುತ್ತಿಲ್ಲವಾದ್ದರಿಂದ ಈ ದೇವಾಲಯಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ.
ಓಣಿಯ ಹಿರಿಯರ ಪ್ರಕಾರ ಈ ದೇವಾಲಯವು ಸುಮಾರು 600 ವರ್ಷ ಹಳೆಯದೆಂದು ತಿಳಿದು ಬಂದಿದೆ. ಗಾಯಿ ಮನೆತನದ ಹಿರಿಯರಾದ ವಸಂತ ಗಾಯಿ ಅವರು ಹೇಳುವಂತೆ ನೀಲಕಂಠೇಶ್ವರ ದೇವಾಲಯವನ್ನು ತಾವು ಸುಸ್ಥಿತಿಯಲ್ಲಿ ಕಂಡಿ ಲ್ಲವೆಂದು ಎಂದಿನಿಂದಲೂ ಇದರ ಅವಸ್ಥೆ ಹೀಗೆಯೇ ಇದೆ ಎನ್ನುತ್ತಾರೆ.
ಈಗಾಗಲೇ ಕಳೆದ ಎಳೆಂಟು ವರ್ಷಗಳಿಂದ ಪ್ರಸಿದ್ಧಿಗೆ ಬಂದಿರುವ ಇದೇ ಭಾಗದ ಶ್ರೀ ಪ್ರಸನ್ನೇಶ್ವರ ದೇವಾಲಯದ ಅತಿ ಸನಿಯದ ಪಕ್ಕದ ಸಂದಿಯಲ್ಲಿ ಇರುವ ಈ ದೇವಾಲಯವಕ್ಕೆ ತೆರಳಲು ಕಿರುದಾದ ಕಾಲು ದಾರಿ ಮಾತ್ರ ಇದೆ. ಅಕ್ಕ ಪಕ್ಕದಲ್ಲಿ ಮನೆಗಳು ಇರುವದರಿಂದ ಇಕ್ಕಟ್ಟಾದ ಪ್ರದೇಶ ಇದ್ದು, ರಾತ್ರಿಯ ವೇಳೆ ಇಲ್ಲಿ ತೆರಳಲು ಸೂಕ್ತ ಬೀದಿ ದೀಪದ ವ್ಯವಸ್ಥೆ ಇಲ್ಲದಿ ರುವದು ನಿಜಕ್ಕೂ ದುಖದಾಯಕ ಸಂಗತಿಯಾಗಿದೆ.
ಸಂಪೂರ್ಣ ಬಿರುಕು ಬಿಟ್ಟು ಇಂದಿಗೂ ನಾಳೆಯೋ ಬೀಳುವ ಸ್ಥಿತಿಯಲ್ಲಿ ಇರುವ ಈ ದೇವಾಲಯದ ಸುತ್ತಳತೆ 20 30 ಆಗಿದೆ. ಅದರಲ್ಲಿಯೇ 10 ಷ10 ಸುತ್ತಳತೆಯ ಗರ್ಭಗುಡಿ ಇದೆ. ಸುತ್ತಲಿದ್ದ ಗೋಡೆ ಬಿದ್ದಿರುವದರಿಂದ ಸರಾಗವಾಗಿ ಪ್ರವೇಶ ಮಾಡಿ ಗರ್ಭ ಗುಡಿ ನೋಡಬಹುದಾಗಿದೆ. ಗರ್ಭ ಗುಡಿ ಸಹ ಬೀಳುವ ಹಂತದಲ್ಲಿದ್ದು, ಕೆಲವು ಭಾಗಗಳಲ್ಲಿ ಗೋಡೆ ಬಿದ್ದು ಹೋಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಗಿಡ ಗಂಟಿಗಳು ಬೆಳೆದಿವೆ. ಹೀಗಾಗಿ ಕಸದ ತೊಟ್ಟಿಯಂತಾಗಿ, ಶಿವನ ಸಾನ್ನಿಧ್ಯ ಅಪವಿತ್ರವಾಗಿದೆ.
ದೇವಾಲಯದ ಇಂದಿನ ಸ್ಥಿತಿ ನೋಡಿದರೇ ಕಳೆದ ಸುಮಾರು ದಶಕಗಳಿಂದ ಇಲ್ಲಿ ಯಾವುದೇ ತರಹದ ಪೂಜೆ ಪುನಸ್ಕಾರಗಳು ನಡೆದಿರುವದು ಕಂಡು ಬರುತ್ತದೆ. ಈ ನೀಲಕಂಠೇಶ್ವರ ದೇವಾಲಯದ ಇಂದಿನ ದುಸ್ಥಿತಿಯಲ್ಲಿ ಕಂಡ ಯಾರೇ ಭಕ್ತರು ಮರುಗದೇ ಇರಲಾರರು.
ಪುರಾತನ ಶಿವ ದೇವಾಲಯದ ದುಸ್ಥಿತಿಯನ್ನು ಸರಿಪಡಿಸಲು ಓಣಿಯ ಹಿರಿಯರಾದ ದೈವಿ ಭಕ್ತ ನಿವೃತ್ತ ಶಿಕ್ಷಕ ಎನ್ ಆರ್ ಕುಲಕರ್ಣಿ ಅವರು ತಮ್ಮ ಕೆಲ ಸಮಾನ ಮನಸ್ಕ ಹಿರಿಯರ ಸಂಗಡ ಚರ್ಚಿಸಿ ಈಗ್ಗೆ ಒಂದು ತಿಂಗಳ ಹಿಂದೆ ಮುಂದೆ ಬಂದು ಕೆಲ ಯೋಜನೆಗಳನ್ನು ಹಮ್ಮಿಕೊಂಡಿರುವರು. ಅವರ ಆಲೋಚನೆಗೆ ತಕ್ಕಂತೆ ಕೆಲವು ದಾನಿಗಳು ಸೂಕ್ತ ರೀತಿಯಿಂದ ಸ್ಪಂದಿಸಲಾರಂಭಿಸಿರುವರು.
ದೇವಾಲಯದ ಮೊದಲ ಹಂತದ ಅಭಿವೃದ್ಧಿಗಾಗಿ ಆವರಣದಲ್ಲಿ ಬಿದ್ದಿದ್ದ ಗೋಡೆಯನ್ನು ಪುನ: ಕಟ್ಟಿರುವರು. ಅದಕ್ಕೆ ಒಂದು ಕಿಡಕಿ ಹಾಗೂ ಒಂದು ಬಾಗಿಲನ್ನು ಅಳವಡಿಸಿರುವರು. ದಾನಿಗಳೊಬ್ಬರು ಈ ಕಾರ್ಯಗಳಿಗೆ ಸಕಲ ರೀತಿಯಿಂದ ರೂ. 35 ಸಾವಿರ ರೂ. ಧನಸಹಾಯ ಮಾಡಿರುವರು.
ದೇವಾಲಯದ ಪುನರುಜ್ಜೀವನದ ಪ್ರರ್ವತಕ ಎನ್ ಆರ್ ಕುಲಕರ್ಣಿಯವರ ಪ್ರಕಾರ ಈ ಭಾಗದಲ್ಲಿ ಐದು ಪ್ರಾಚೀನ ಶಿವ ದೇವಾಲಯಗಳಿದ್ದು , ಅವುಗಳೆಂದರೆ ಚಂದ್ರಮೌಳೇಶ್ವರ, ಪ್ರಸನ್ನೇಶ್ವರ, ಸುಂದರೇಶ್ವರ, ನೀಲಕಂಠೇಶ್ವರ ಹಾಗೂ ಪರಮಾ ನಂದೇಶ್ವರ.
ಪುನರುಜ್ಜೀವನಗೊಳ್ಳುತ್ತಿರುವ ನೀಲಕಂಠೇಶ್ವರ ದೇವಾಲಯದ ಮೂರು ದಿಕ್ಕುಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮನೆಗಳಿರುವದು ವಿಶೇಷ. ಈ ಸ್ಥಳದ ವಿಶೇಷವೆಂದರೆ ಇವರಾರು ತಮ್ಮ ಮನೆಗಳಲ್ಲಿ ಮಾಂಸಾಹಾರ ಸೇವಿಸುತ್ತಿಲ್ಲ. ಏಕೆಂದರೆ ಅವರವರ ಮನೆಯಲ್ಲಿ ಎಂದಾದರೂ ಮಾಂಸಾಹಾರ ತಂದು ಸ್ವೀಕರಿಸಲು ಸಿದ್ಧರಾದರೆ ಅವರ ಮನೆಗಳಲ್ಲಿ ಸರ್ಪ ಕಂಡು ಬರುತ್ತದೆ. ಆ ಬಳಿಕ ಮಾಂಸಾಹಾರವನ್ನು ತಿನ್ನದೇ ಎಸೆದು ಬಿಡುತ್ತಾರೆ. ಈ ವಿಷಯವನ್ನು ನೆರೆಯ ಮನೆಯ ನಿವಾಸಿಗರಾದ ಝರಿನಾ ಖಲಿಫಾ ಹಾಗೂ ರಬಿಯಾ ಅಗಸನಾಳ ಖಚಿತ ಪಡಿಸುವರು. ಇದರಿಂದ ನೀಲಕಂಠೇಶ್ವರನ ಮಹಿಮೆ ಅರಿವಾಗುತ್ತದೆ.
ಎನ್ ಆರ್ ಕುಲಕರ್ಣಿ ಅವರ ಪ್ರಕಾರ ಸುಮಾರು 3 ಲಕ್ಷ ರೂ ಅಂದಾಜು ವೆಚ್ಚದಲ್ಲಿ ದೇವಾಲಯವನ್ನು ಪುನರು ಜ್ಜೀವನ ಮಾಡುವ ಬಯಕೆ ಇದೆ. ಗರ್ಭಗುಡಿಯಲ್ಲಿ ಶಿವ ಲಿಂಗವನ್ನು ಎತ್ತರದ ವೇದಿಕೆ ನಿರ್ಮಿಸಿ ಅದರ ಮೇಲೆ ಪ್ರತಿಷ್ಠಾಪಿಸುವ ಯೋಜನೆ ಹೊಂದಲಾಗಿದೆ.
ಈ ಪುರಾತನ ಶಿವ ದೇವಾಲಯದ ಪುನರುಜ್ಜೀವನಕ್ಕೆ ಭಕ್ತರಿಂದ ದಾನದ ಅವಶ್ಯಕತೆ ಇದೆ. ದಾನಿಗಳು ಹೆಚ್ಚಿನ ಮಾಹಿತಿಗಾಗಿ ಎನ್ ಆರ್ ಕುಲಕರ್ಣಿ ಅವರ ದೂರವಾಣಿ ಸಂಖ್ಯೆ: 9632439697 ಸಂರ್ಪಕಿಸಬಹುದಾಗಿದೆ.