
ಬೀದರ. ನ.13: ಕುಶಲಕರ್ಮಿಗಳು ಅಭಿವೃದ್ದಿಯಾಗದಿದ್ದರೆ ದೇಶದ ಆರ್ಥಿಕ ಪ್ರಗತಿಗೆ ಮಾರಕ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಕುಶಲಕರ್ಮಿಗಳ ಅಭಿವೃದ್ದಿಗೆ ಪಿ.ಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ ಈ ಯೋಜನೆ ಲಾಭ ಜಿಲ್ಲೆಯ ಹೆಚ್ಚಿನ ಜನರು ಪಡೆಯಬೇಕು ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಪಿಎಂ- ವಿಶ್ವಕರ್ಮ ಯೋಜನೆಯಡಿ ವೃತ್ತಿಪರ ಕುಶಲಕರ್ಮಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಯಕದಲ್ಲಿಯೇ ಸ್ವರ್ಗವಿದೆ ಎಂದು ಅರಿತಿದ್ದ ಬಸವನಣ್ಣನವರ 12ನೇ ಶತಮಾನದಲ್ಲಿಯೇ ಎಲ್ಲಾ ವೃತ್ತಿಯವರಿಗೂ ಒಗ್ಗೂಡಿಸುವಂತೆ ಮಾಡಿದರು. ಹಿಂದಿನಿಂದ ಮಾಡಿಕೊಂಡು ಬಂದಿರುವ ವೃತ್ತಿಯನ್ನು ಇಂದು ಬೀಡಲಾಗದು, ಆದರೆ ಹಿಂದಿನ ಮಾದರಿಯಲ್ಲಿ ವೃತ್ತಿ ನಿರ್ವಹಿಸಿದರೆ ಇಂದು ಹೊಟ್ಟೆ ತುಂಬದು, ಪ್ರಸ್ತುತ ದೇಶದಲ್ಲಿ ಸ್ಪರ್ಥಾತ್ಮಕ ಯುಗವಿದ್ದು ಅದಕ್ಕೆ ತಕ್ಕಂತೆ ಕುಶಲಕರ್ಮಿಗಳು ತಮ್ಮ ಕೌಶಲ್ಯದಲ್ಲಿ ವೃದ್ಧಿಯಾಗಬೇಕಾಗಿದೆ ಈ ಸಮಸ್ಯೆಯನ್ನು ಪಿ.ಎಂ ವಿಶ್ವಕರ್ಮ ಯೋಜನೆ ನೀಗಿಸಲಿದೆ ಎಂದು ಹೇಳಿದರು.
ಪಿ.ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ವೃತಿಪರ ಕುಶಲಕರ್ಮಿಗಳಿಗೆ ತರಬೇತಿ, 15 ಸಾವಿರ ವರೆಗಿನ ಮೌಲ್ಯದ ವೃತ್ತಿ ಉಪಕರಣಗಳು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಡಿಜಿಟಲ್ ಮಾರ್ಕೆಟ್ ವೇದಿಕೆ ಒದಗಿಸಲಾಗುವುದು.ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಲಾಭವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಇದರ ಲಾಭ ಪಡೆದು ದೇಶದ ಅನೇಕ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ್ಪಾ.ಎಂ ಮಾತನಾಡಿ, ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಕಷ್ಟು ಕುಶಲಕರ್ಮಿಗಳು ನೋಂದಣಿ ಮಾಡಿಸಿಕೊಂಡಿದ್ದು. ಇನ್ನು ಹೆಚ್ಚಿನ ಕುಶಲಕರ್ಮಿಗಳು ಇದರ ಲಾಭ ಪಡೆಯುವಂತಾಗಲು ಪಿ.ಎಂ ವಿಶ್ವಕರ್ಮ ಯೋಜನೆ ಕುರಿತು ಇನ್ನು ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನುಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೆಶಕ ಬಿ.ಎಸ್. ಪಾಟೀಲ್,ಲೀಡ ಬ್ಯಾಂಕ್ ವ್ಯವಸ್ಥಾಪಕ ಸಂಜಿವಕುಮಾರ, ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಜಿಲ್ಲೆಯ ವಿವಿಧ ವೃತ್ತಿಪರ ಕುಶಲಕರ್ಮಿ ಸಂಘಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.