ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿಗಳ ಹುದ್ದೆ ನೇಮಕಕ್ಕೆ ಆಗ್ರಹಿಸಿ: ಸರ್ಕಾರಕ್ಕೆ ಮನವಿ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.20: ವಿಜಯನಗರ ಜಿಲ್ಲೆಯಲ್ಲಿ ವಿಕಲ ಚೇತನರ ಕಲ್ಯಾಣಾಧಿಕಾರಿಗಳ ಖಾಯಂ ಹುದ್ದೆಯ ನೇಮಕ ಮತ್ತು ಡಿ.ಡಿ.ಓ ಕೋಡ್ ಅನುಮೋದನೆಗೆ ಆಗ್ರಹಿಸಿ ಕೊಟ್ಟೂರು ತಾಲೂಕು ವಿಕಲ ಚೇತನ್ ರ ಒಕ್ಕೂಟದ ಪದಾಧಿಕಾರಿಗಳು ತಾಲೂಕಾಡಳಿತ ಮೂಲಕ ಸರ್ಕಾರಕ್ಕೆ ಕಳಿಸುವಂತೆ  ಮನವಿ ಪತ್ರ ಸಲ್ಲಿಸಿದರು.
ತಾಲೂಕು ವಿಕಲಚೇತನರ ಎಂ.ಆರ್.ಡಬ್ಲ್ಯೂ ,ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯೂ ಪದಾಧಿಕಾರಿಗಳು ಮಾತನಾಡಿ ವಿಜಯನಗರ ಜಿಲ್ಲೆ ಪ್ರಾರಂಭವಾಗಿ ಎರಡು ವರ್ಷವಾದರೂ ವಿಕಲಚೇತನ್ ಜಿಲ್ಲಾ ಕಚೇರಿ ಇಲ್ಲಿ ಪ್ರಾರಂಭವಾಗದೆ ಇರುವುದರಿಂದ, ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಸಮರ್ಪಕವಾಗಿ ದೊರೆಯದೆ,ಜಿಲ್ಲೆಯ ವಿಕಲಚೇತನರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ವಿಜಯನಗರ ಜಿಲ್ಲೆಯ ತಾಲೂಕಿನ ಜನರಿಗೆ ಕೆಲಸ ಕಾರ್ಯಗಳಿಗೆ ಅನುಕೂಲವಾಗಲೆಂದು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆಯನ್ನು ಸರ್ಕಾರ ಘೋಷಿಸಿದೆ,ನೂತನ ಜಿಲ್ಲೆಯಾಗಿ ಎರಡು ವರ್ಷಗಳಾಗಿವೆ ಆದರೂ ವಿಕಲಚೇತನರಿಗೆ ಬಳ್ಳಾರಿಗೆ ಬಂದೋಗುವ ಕಷ್ಟ ಇನ್ನೂ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ವಿಕಲಚೇತನ ಸಹೋದರ-ಸಹೋದರಿಯರು ದೂರದ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವಲ್ಲಿ ಪಡುವಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ  ವಿಜಯನಗರ ಜಿಲ್ಲೆಯಲ್ಲಿ ಕಲ್ಯಾಣಾಧಿಕಾರಿಗಳ ಕಚೇರಿ ಮತ್ತು ಖಾಯಂ ಹುದ್ದೆ ನೇಮಕ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ವಿಕಲಚೇತನರ ಪ್ರಭಾರಿ ಎಂ.ಆರ್.ಡಬ್ಲ್ಯೂ ಮೈದೂರ ನಾಗಪ್ಪ, ಕೊಟ್ಟೂರು ಯು.ಆರ್.ಡಬ್ಲ್ಯೂ ಲಕ್ಷ್ಮೀ ಟಿ, ಮತ್ತು ತಾಲೂಕಿನ ಗ್ರಾಮೀಣ ವಿಭಾಗದ ವಿ.ಆರ್. ಡಬ್ಲ್ಯೂ ಗಳಾದ ಕೊಟ್ರೇಶ್,ಕೆಂಚಮ್ಮ, ವಾಗೀಶ್ ರೆಡ್ಡಿ, ಕೊಟ್ರಮ್ಮ, ನಾಗರಾಜ್, ವಿಜಯಕುಮಾರಿ, ರಾಘವೇಂದ್ರ, ರೇಖಾ, ಸುಂಕ್ಲಮ್ಮ, ನಾರಮ್ಮ, ವಿಶಾಲಾಕ್ಷಿ, ಗೀತಾ, ಪ್ರೇಮ ಇದ್ದರು.