
ಕೆ.ಆರ್.ನಗರ, ಮಾ.18:- ವಿಧಾನಸಭೆ ಮತ್ತು ಸಂಸತ್ನಲ್ಲಿ ಮಹಿಳೆಯರಿಗೆ ಶೇ33 ರಷ್ಟು ರಾಜಕೀಯ ಮೀಸಲಾತಿ ಕೊಡಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಿಂದ ಮಾತ್ರ ಸಾದ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾಸೋಮಶೇಖರ್ ಹೇಳಿದರು.
ಪಟ್ಟಣದ ಹೆಚ್.ಡಿ.ದೇವೆಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಮೈಸೂರು ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ರಾಜಕೀಯವಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ33 ರಷ್ಟು ಮೀಸಲಾತಿ ಇದ್ದು ಅದು ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರ್ಕಾರದಿಂದ ವಿಧಾನಸಭೆ ಮತ್ತು ಸಂಸತ್ತಿಗೂ ಸಿಗಲಿದೆ ಎಂದು ಭರವಸೆ ನೀಡಿದರು.
ಇಂದು ನಾರಿ ಬದಲಾಗಿದ್ದಾಳೆ ಸ್ವಂತಿಕೆ, ಯೋಚನೆ ಮಾಡುವ ಶಕ್ತಿ, ಯಾರಿಗೆ ಯಾಕೇ ಯಾವ ಸಂದರ್ಭದಲ್ಲಿ ಮತ ನೀಡಬೇಕು ಎಂಬುದು ಗೊತ್ತಿದೆ. ಸಮಾಜದಲ್ಲಿ ಮಹಿಳೆಯರಿಗೆ ಮಾನ್ಯತೆ ಸಿಕ್ಕಿದೆ ಇದಕ್ಕೆ ಕಾರಣ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು, ಅವರ ಅಧಿಕಾರವಧಿಯಲ್ಲಿ ಭಾಗ್ಯಲಕ್ಷಿ?ಮ ಯೋಜನೆ, ಹೆಣ್ಣುಮ್ಕಕಳ ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಹೆಣ್ಣು ಕಲಿಯಬೇಕು ಕಲಿಯದಿದ್ದರೇ ಕುಟುಂಬವೇ ಕಲಿಯಲ್ಲಾ ಎಂಬ ಉದಾಹರಣೆಗಳಿವೆ. ಮಹಿಳಾ ಸಮಾನತೆ, ಭ್ರಷ್ಟಚಾರ ಮುಕ್ತ ಆಡಳಿತ, ಬಡತನ ನಿರ್ಮೂಲನೆ, ರಾಜ್ಯ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಳೆ ನೀರು ಹೋಗಿ ಹೊಸ ನೀರು ಬರಬೇಕು. ಆಡಳಿತದಲ್ಲಿರುವ ಜೆಡಿಎಸ್ ಪಕ್ಷದ ಶಾಸಕ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ರವರುಗಳನ್ನು ಬಿಟ್ಟು ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಇಂದಿನ ಮಹಿಳಾ ಸಮಾವೇಶ ವಿರೋಧಿಗಳಲ್ಲಿ ನಡುಕ ಹುಟ್ಟಿಸಬೇಕೆಂದರು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ರೀನಾಪ್ರಕಾಶ್ ಮಾತನಾಡಿ 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಘೋಷಣೆ ಮಾಡಿದಂತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ ಕೇಳುವಾಗ ತಲೆ ಎತ್ತಿ ಮತ ಕೇಳಬೇಕು ಅಂತಹ ಆಡಳಿತ ನೀಡುತ್ತೇನೆ ಎಂದು ನೀಡಿದ ಭರವಸೆಯಂತೆ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂದಿನಿ, ರಾಜ್ಯ ಪ್ರವಾಸೋಧ್ಯಮ ಇಲಾಖೆ ನಿರ್ದೇಶಕಿ ಪ್ರಪುಲ್ಲಾಮಲ್ಲಾಡಿ, ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ತಾಲೂಕು ಅಧ್ಯಕ್ಷರಾದ ದಾಕ್ಷಾಯಿಣಿ, ಮಂಜು, ಜಿಪಂ ಮಾಜಿ ಸದಸ್ಯೆ ನಳಿನಾಕ್ಷಿವೆಂಕಟೇಶ್, ಪುರಸಭಾ ಸದಸ್ಯರಾದ ಕೆ.ಬಿ.ವೀಣಾ, ಜಿ.ಪಿ.ಮಂಜು, ಉಮಾಶಂಕರ್, ಮಾದ್ಯಮ ಸಂಚಾಲಕ ನಾಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.