
ಕಲಬುರಗಿ,ಸೆ.9: ಕಲಬುರಗಿ ಜಿಲ್ಲೆಯಲ್ಲಿ ಬ್ಯಾಂಕುಗಳು ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವುದರ ಮೂಲಕ ಜಿಲ್ಲೆಯ ಪ್ರಗತಿಗೆ ಕೈಜೋಡಿಸುವುದರ ಜೊತೆಗೆ ಸಿ.ಡಿ. ರೇಷಿಯೋ ಶೇ.69.03 ಕಾಯ್ದುಕೊಂಡಿರುವುದಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಶುಕ್ರವಾರ ಕಲಬುರಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸಮಾಲೋಚನಾ ಸಮಿತಿ (ಡಿ.ಸಿ.ಸಿ), ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ) ಹಾಗೂ ವಿಶೇಷ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದ ಅವರು, ಕೃಷಿ ವಲಯದಲ್ಲಿ 1,487 ಕೋಟಿ ರೂ. ಗುರಿ ಪೈಕಿ 1,417 ಕೋಟಿ ರೂ. ಗಳು ಬ್ಯಾಂಕ್ ಗಳು ಸಾಲ ನೀಡಿ ಶೇ. 95.29 ಗುರಿ ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಅನ್ನದಾತ ರೈತರಿಗೆ ಸಾಧ್ಯವಾದಲ್ಲಿ ಶೇ.100ಕ್ಕಿಂತ ಹೆಚ್ಚಿನ ಸಾಲ ಸೌಲಭ್ಯ ನೀಡಿ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿಗೆ ಬ್ಯಾಂಕಿನ ಆರ್ಥಿಕ ಸಹಾಯ ಅತ್ಯಗತ್ಯವಾಗಿರುತ್ತದೆ. ಸಾಲ, ಸಬ್ಸಿಡಿ ಪಡೆಯಲು ಬ್ಯಾಂಕಿಗೆ ಬರುವ ಸಾರ್ವಜನಿಕರು, ಉದ್ಯಮಿಗಳು, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಕಾಲಮಿತಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಭಂವರ್ ಸಿಂಗ್ ಮೀನಾ ತಿಳಿಸಿದರು.
ಪಿ.ಎಂ.ಸ್ವನಿಧಿ ಯೋಜನೆಯಡಿ ಜೂನ್ ತ್ರೈಮಾಸಿಕ ಅಂತ್ಯಕ್ಕೆ ನಿಗದಿತ 11,081 ಗುರಿ ಪೈಕಿ 9,896 ಬೀದಿ ಬದಿ ವ್ಯಾಪಾರಿಗಳಿಗೆ ಮೊದಲನೇ ಕಂತಿನ ರೂಪದಲ್ಲಿ ತಲಾ 10 ಸಾವಿರ ರೂ., ಎರಡನೇ ಕಂತಿಗೆ ಅರ್ಜಿ ಸಲ್ಲಿಸಿದ 3,675 ಜನರ ಪೈಕಿ 3,381 ಜನರಿಗೆ ತಲಾ 20 ಸಾವಿರ ರೂ. ಹಾಗೂ 3ನೇ ಕಂತಿಗೆ ಅರ್ಜಿ ಸಲ್ಲಿಸಿದ 481 ರಲ್ಲಿ 440 ಜನರಿಗೆ ಸಾಲ ನೀಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು, ಬೀದಿ ಬದಿ ವ್ಯಾಪಾರಿಗಳು ದಿನವಿಡಿ ದುಡಿದು ತಿನ್ನುವ ಬಡ ಜನರಾಗಿದ್ದು, ಇಂತಹವರಿಗೆ ಗುರಿಯಾಗಿಸಿ ಹೆಚ್ಚಿನ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಟಲ್ ಪಿಂಚಣಿ ಯೋಜನೆಯಡಿ ನಿಗದಿತ ಗುರಿಕ್ಕಿಂತ ಶೇ.114ರಷ್ಟು ಸಾಧನೆ ಮಾಡಿದಕ್ಕೆ ಕಲಬುರಗಿ ಜಿಲ್ಲೆಗೆ ಕೇಂದ್ರ ಸರ್ಕಾರದ ಪಿ.ಎಫ್.ಆರ್.ಡಿ.ಎ ಇಲಾಖೆಯಿಂದ ಅವಾರ್ಡ್ ಬಂದಿರುವುದಕ್ಕೆ ಮತ್ತು ಮತ್ಸ್ಯ ಕೃಷಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಸಾಧನೆಗೆ ಸಾಲ ಕಲ್ಪಿಸಿದಕ್ಕೆ ಸಿ.ಇ.ಓ. ಭಂವರ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿ ಇದೇ ರೀತಿಯ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತೆ ಬ್ಯಾಂಕರ್ಸ್ ಗಳಿಗೆ ಸಲಹೆ ನೀಡಿದರು.
ಮುದ್ರಾ ಸಾಲ ಇನ್ನು ಹೆಚ್ಚು ಕೊಡಿ: ಸಭೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಜಿಲ್ಲೆಯ ಸಮಗ್ರ ಬೆಳವಣಿಗೆಗೆ ನವೋದ್ಯಮ ಅರಂಭಿಸಲು ಮುಂದೆ ಬರುವ ನವೋದ್ಯಮಿಗಳಿಗೆ ಮುದ್ರಾ ಯೋಜನೆಯಡಿ ಇನ್ನು ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕು. ಮುದ್ರಾ ಯೋಜನೆಯಡಿ ಜೂನ್-2023 ತ್ರೈಮಾಸಿಕ ಅಂತ್ಯಕ್ಕೆ ಶಿಶು ವಿಭಾಗದಲ್ಲಿ 19,123 ಜನರಿಗೆ 6,244 ಲಕ್ಷ ರೂ., ಕಿಶೋರ ವಿಭಾಗದಡಿ 7,246 ಜನರಿಗೆ 8,407 ಲಕ್ಷ ರೂ. ಹಾಗೂ ತರುಣ ವಿಭಾಗದಲ್ಲಿ 467 ಜನರಿಗೆ 3,797 ಲಕ್ಷ ರೂ. ಸಾಲ ನೀಡಿದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಂಸದರು, ಉದ್ಯಮಿಗಳಿಗೆ ಬ್ಯಾಂಕ್ ಸಾಲ ನೀಡಿದಲ್ಲಿ ಅದು ಉದ್ಯೋಗ ಸೃಜನೆಗೆ ಸಹಕಾರವಾಗಲಿದೆ. ಸ್ಥಳೀಯರಿಗೆ ಇಲ್ಲಿಯೆ ಉದ್ಯೋಗ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
2,000 ರೂ. ನೋಟು ಸೆ.30 ರೊಳಗೆ ಬ್ಯಾಂಕಿಗೆ ಸಲ್ಲಿಸಿ: ಬೆಂಗಳೂರಿನ ಅರ್.ಬಿ.ಐ ಎಫ್.ಐ.ಡಿ.ಡಿ. ಮ್ಯಾನೇಜರ್ ಸುಪ್ರಿಯಾ ಬ್ಯಾನರ್ಜಿ ಮಾತನಾಡಿ ಆರ್.ಬಿ.ಐ. ನಿರ್ದೇಶನದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ 2,000 ರೂ. ಮುಖ ಬೆಲೆಯ ನೋಟುಗಳನ್ನು ಇದೇ ಸೆಪ್ಟೆಂಬರ್ 30 ರೊಳಗೆ ಬ್ಯಾಂಕುಗಳಿಗೆ ಜಮೆ ಮಾಡಬೇಕು. ಇನ್ನು 10 ರೂ. ಮುಖ ಬೆಲೆಯ ನಾಣ್ಯ ಕಾನೂನು ಬದ್ಧವಾಗಿ ಚಲಾವಣೆಯಲ್ಲಿದ್ದು, ಎಲ್ಲರೂ ಇದನ್ನು ಸ್ವೀಕರಿಸಬೇಕು. ಯಾರು ನಿರಾಕರಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯ ಸಿ.ಡಿ. ರೇಷಿಯೋ ಶೇ.69.03: ಎಸ್.ಬಿ.ಐ. ಬ್ಯಾಂಕಿನ ಜಿಲ್ಲಾ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಮತ್ತು ಸಮಿತಿಯ ಸಂಯೋಜಕ ಸದಾಶಿವ ವಿ. ರಾತ್ರಿಕರ್ ಮಾತನಾಡಿ, ಜೂನ್ ತ್ರೈಮಾಸಿಕ ಅಂತ್ಯಕ್ಕೆ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ನಿಗದಿತ ಆರ್ಥಿಕ ಗುರಿ 351 ಕೋಟಿ ರೂ. ಗಳಿಗೆ ಎದುರಾಗಿ 917 ಕೋಟಿ ರೂ. ಸಾಲ ನೀಡಲಾಗಿದೆ. ಆದ್ಯತಾ ವಲಯದಡಿ ಶಿಕ್ಷಣ, ಹೌಸಿಂಗ್ ಸೇರಿದಂತೆ 2,384 ಕೋಟಿ ರೂ. ಸಾಲ ಒದಗಿಸದ್ದು, ಇದು ನಿಗದಿತ ಗುರಿಗೆ ಎದುರಾಗಿ ಶೇ.112.50 ರಷ್ಟು ಸಾಧನೆ ಮಾಡಿದೆ. ಇದರಲ್ಲಿ 823 ಕೋಟಿ ರೂ. ಆರ್ಥಿಕ ಹಿಂದುಳಿದ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ಜಿಲ್ಲೆಗೆ ಆರ್.ಬಿ.ಐ ಕ್ರೆಡಿಟ್-ಡೆಬಿಟ್ ರೇಷಿಯೊ ಶೇ.60 ನಿಗದಿಪಡಿಸಿದ್ದು, ಪ್ರಸ್ತುತ ಜಿಲ್ಲೆಯ ರೇಷಿಯೋ ಶೇ.69.03 ದೊಂದಿಗೆ ಉತ್ತಮ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಇಲಾಖಾವಾರು ಲಿಂಕ್ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಎಸ್.ಬಿ.ಐ. ಬ್ಯಾಂಕಿನ ರಿಜನಲ್ ಮ್ಯಾನೇಜರ್ ಸುಮಾ ಎಚ್., ಲೋನ್ ವಿಭಾಗದ ಚೀಫ್ ಮ್ಯಾನೇಜರ್ ರಾಮಸುಬ್ರಣ್ಯಂ, ಕೆ.ಎ.ಜಿ.ಬಿ. ಬ್ಯಾಂಕಿನ ವಲಯ ವ್ಯವಸ್ಥಾಪಕ ಶಾಂತಲಿಂಗಯ್ಯ ಹುಲಿಮನಿ ಸೇರಿದಂತೆ ವಿವಿಧ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.