ಪರಿಸರದ ಕುರಿತು ಜಾಗೃತಿ ಮೂಡಿಸುವ ಜಲಪಾತ ಚಿತ್ರ ಅಕ್ಟೋಬರ್ 6ರಂದು ತೆರೆಗೆ ಬರಲಿದೆ. ನಿರ್ದೇಶಕ ರಮೇಶ್ ಬೇಗಾರ್ ಮಾತನಾಡಿ ಟ್ರೇಲರ್ಗೆ ಜನಮೆಚ್ಚುಗೆ ಬರುತ್ತಿದೆ. ಮಲೆನಾಡ ಸುಂದರ ಪರಿಸರದ ಹಾಗೂ ಅಲ್ಲಿನ ಸಮಸ್ಯೆ ಪರಿಚಯಿಸುವ ಚಿತ್ರ ಎಲ್ಲರ ಬೆಂಬಲ ಸಹಕಾರವಿರಲಿ ಎಂದು ಕೇಳಿಕೊಂಡರು.
ನಿರ್ಮಾಪಕ ಟಿ.ಸಿ.ರವೀಂದ್ರ ತುಂಬರಮನೆ ಮಾತನಾಡಿ ಪರಿಸರ ತಜ್ಞ ಎಲ್ಲಪ್ಪ ರೆಡ್ಡಿ ಶಿಷ್ಯ. ಪರಿಸರದ ಬಗ್ಗೆ ಕಾಳಜಿ ಹೆಚ್ಚು. ರಮೇಶ್ ಬೇಗಾರ್ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದರು.
ನಾಯಕ ರಜನೀಶ್, “ಪದವಿ ಪೂರ್ವ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದರೆ ನಾಯಕಿ ನಾಗಶ್ರೀ ಬೇಗಾರ್, ಮಲೆನಾಡನ್ನು ಕೇವಲ ಪ್ರವಾಸಿತಾಣನಾಗಷ್ಟೇ ನೋಡುತ್ತಿದ್ದೇವೆ. ಆದರೆ ಅಲ್ಲಿನ ಸಂಸ್ಕೃತಿಯ ಪರಿಚಯದ ಜೊತೆಗೆ ಸಮಸ್ಯೆಗಳನ್ನು ತೋರಿಸುವ ಪ್ರಯತ್ನ ಚಿತ್ರ ಇದು ಎಂದರು.
ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನಿರ್ದೇಶಕ ರಮೇಶ್ ಬೇಗಾರ್ ಅವರ ಕಾರ್ಯವೈಖರಿ ನನಗೆ ಇಷ್ಟ. ಹಾಗಾಗಿ ಅವರ ಎರಡನೇ ಚಿತ್ರದಲ್ಲೂ ನಟಿಸಿದ್ದೇನೆ ಎಂದರು. ಚಿತ್ರದಲ್ಲಿ ನಟಿಸಿರುವ ಎಂ.ಆರ್ ಸುರೇಶ್, ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ, ಗಾಯಕಿ ಪದ್ಮಿನಿ ಓಕ್ ಹಾಗೂ ಛಾಯಾಗ್ರಾಹಕ ಶಶೀರ್ ಚಿತ್ರದ ಬಗ್ಗೆ ಮಾತನಾಡಿದರು.