
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.09: ನನ್ನ ಪತಿ ಮಾಜಿ ಸಚಿವ ಜನಾರ್ಧನರೆಡ್ಡಿ ಬಗ್ಗೆ ಕೆಲವರು ಇಲ್ಲ ಸಲ್ಲದ ಮಾತನಾಡುತ್ತಿದ್ದಾರೆ. ಅಂತಹವರಿಗೆ ನಾನು ಸವಾಲು ಹಾಕುವೆ. ಅವರ ಅವಧಿಯಲ್ಲಿ ಆದ ಬಳ್ಳಾರಿ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಆರ್ ಪಿಪಿ ಬಳ್ಳಾರಿ ನಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣಾ ಕರೆದಿದ್ದಾರೆ.
ಅವರು ಇಂದು ಇಲ್ಲಿನ ವಿದ್ಯಾ ನಗರದಲ್ಲಿ ನಡೆದ ಪಕ್ಷಕ್ಕೆ ಹಲವು ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಾನು ಈವರಗೆ ಯಾರ ಬಗ್ಗೆಯೂ ಮಾತನಾಡುತ್ತಿರಲಿಲ್ಲ. ನಮ್ಮದೇನಿದ್ದರು, ನಗರದ ಅಭಿವೃದ್ಧಿಯೇ ಗುರಿಯಾಗಿತ್ತು. ಆದರೆ ಜನಾರ್ಧನರೆಡ್ಡಿ ಅವರನ್ನು 12 ವರ್ಷ ಬಳ್ಳಾರಿಯಿಂದ ದೂರವಿರುವಂತೆ ಮಾಡಿದರು. ಅಲ್ಲದೆ ರಾಜಕೀಯವಾಗಿ ದೂರವಿರಿಸಲು ಪ್ರಯತ್ನಿಸಿದರು. ಆದರೆ ಜನಸೇವೆ ಬಯಸಿದ ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ಕಟ್ಟಿ ಬಳ್ಳಾರಿ ಜವಾಬ್ದಾರಿ ನನಗೆ ನೀಡಿದ್ದಾರೆ.
ಜನಾರ್ಧನರೆಡ್ಡಿ ಅವರು ಆಡಳಿತ ನಡೆಸುವಾಗ ತಾವು ಅಧಿಕಾರ ಅನುಭವಿಸಿದ ಹಲವರು ಈಗ ನಮ್ಮವರೂ ಸೇರಿ ಜನಾರ್ಧನರೆಡ್ಡಿ ಅವರ ಬಗ್ಗೆ ಇಲ್ಲ ಸಲ್ಲದ ರೀತಿಯಲ್ಲಿ ಮಾತನಾಡಿದರೆ ನಾನು ಸುಮ್ಮನಿರಲ್ಲ.
ಜನಾರ್ಧನರೆಡ್ಡಿ ಅವರು ಹೇಗೆ ಬಳ್ಳಾರಿ ಅಭಿವೃದ್ಧಿ ಮಾಡಿದ್ದಾರೆ. ನೀವು ಹೇಗೆ ಮಾಡಿದ್ದೀರಿ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಸಿದ್ದನಿದ್ದೇನೆಂದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ, ಮುಖಂಡ ಓಎಂಸಿ ಶ್ರೀನಿವಾಸರೆಡ್ಡಿ, ಗುರ್ರಂ ವೆಂಕಟರಮಣ, ಶಾಸಾಬ್, ವಿ.ಎಸ್.ಮರಿದೇವಯ್ಯ, ಪರ್ವಿನ್ ಬಾನು, ರಾಮುಡು ಮೊದಲಾದವರು ಇದ್ದರು.
ಸಂಜಯ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.