
ಮಾನ್ವಿ,ಮಾ.೧೯- ತಾಲೂಕಿನ ದದ್ದಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜನಸೇವಾ ಗ್ರಾಮೀಣಾಭಿವೃದ್ದಿ ಸಂಸ್ಥೆ ನಕ್ಕುಂದಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಸಂಯುಕ್ತಶ್ರಯದಲ್ಲಿ ನಡೆದ ಸ್ವಾತಂತ್ರ ಅಮೃತ ಭಾರತಿಗೆ ಕನ್ನಡದ ಅರತಿಯ ಅಂಗವಾಗಿ ಗಡಿನಾಡು ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಬಸವರಾಜ ನಕ್ಕುಂದಿ ಚಾಲನೆ ನೀಡಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಉಳಿಯಬೇಕು ಎನ್ನುವ ಉದ್ದೇಶದಿಂದ ವಿವಿಧ ಭಾಷಿಕರು ಇರುವ ಗಡಿ ಭಾಗದಲ್ಲಿ ಕನ್ನಡ ಭಾಷೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಸ್ಥೆಯ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ಕೂಡ ಹಲವು ಕಾರ್ಯಕ್ರಮಗಳನ್ನು ಗಡಿ ಭಾಗದಲ್ಲಿ ಹೆಚ್ಚಾಗಿ ನಡೆಸಬೇಕು ಹಾಗೂ ಸರಕಾರ ಗಡಿಯಲ್ಲಿನ ಕನ್ನಡ ಶಾಲೆಗಳ ಅಭಿವೃದ್ದಿ ಹಾಗೂ ಶಿಕ್ಷಕರ ಕೊರತೆಯನ್ನು ನಿವಾರಿಸಿ ಗಡಿನಾಡು ಕನ್ನಡಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡುವುದರಿಂದ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ ಎಂದು ತಿಳಿಸಿದರು.
ಅಮರೇಶ ಗವಾಯಿಗಳಿಂದ ಸುಗಮ ಸಂಗೀತ, ಚೈತನ್ಯರಿಂದ ಭರತನಾಟ್ಯ, ನವೀನ್ ರವೀಂದ್ರರಾವ್ ಶಾಸ್ತ್ರೀಯ ಸಂಗೀತ, ಶಾಂತ ಬಲ್ಲಟ್ಟಗಿಯವರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು. ರಘುಕುಮಾರ್ ತಬಲಸಾಥ್ ನೀಡಿದರು. ಕಲಾವಿದರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಯಲ್ಲಪ್ಪ ಬಾದರದಿನ್ನಿ, ಅಯ್ಯನಗೌಡ, ಮೌನೇಶ್ ದದ್ದಲ್, ಸಾದಪೂರ್ ಗ್ರಾ.ಪಂ.ಅಧ್ಯಕ್ಷರಾದ ಹನುಮಂತ ದೊಡ್ಡಮನಿ, ಪಿ.ಡಿ.ಒ.ಶಿವಗೇನಿ ನಾಯಕ, ಗ್ರಾ.ಪಂ.ಸದಸ್ಯರಾದ ತಾಯಮ್ಮ, ಭಾಗೀರಥಿ, ಮಹಾದೇವಿ, ಮು.ಗುರು.ವಿದ್ಯಾರಣ್ಯ ಕಳಸ, ಅಮ್ಮಣ್ಣ, ರಾಚಯ್ಯ, ರವೀಂದ್ರ, ಸಿದ್ದಣ್ಣ, ಹುಲಿಗಯ್ಯ, ಈರಪ್ಪ, ದೇವೇಶ ಸೇರಿದಂತೆ ಇನ್ನಿತರರು ಇದ್ದರು.