ಕಲಬುರಗಿ:ಜೂ.21: ಚುನಾವಣಾ ಪ್ರಣಾಳಿಕೆಯಂತೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಲು ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ.ಕೂಡಲೆ ಇದನ್ನು ಕೈ ಬಿಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹ.ಆದರೆ ಉಚಿತ ಯೋಜನೆಗಳು ಪೂರೈಸುವುದಕ್ಕೆ ಆರ್ಥಿಕ ಸಮಸ್ಯೆ ಎದುರಾಗುತ್ತಿದ್ದು ಇದನ್ನು ನಿಭಾಯಿಸಲು ವಿದ್ಯುತ್ ದರ, ಬಸ್ ಪ್ರಯಾಣ ದರ ಹಾಗೂ ಜನರ ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ.ಈಗಾಗಲೇ ತಿಂಗಳ ವಿದ್ಯುತ್ ಬಿಲ್ ಮೂರುಪಟ್ಟು ಹೆಚ್ಚಳವಾಗಿದ್ದರಿಂದ ಜನರು ಕಂಗಾಲಾಗಿದ್ದಾರೆ.500 ರೂ ಬರುತ್ತಿದ್ದ ವಿದ್ಯುತ್ ಬಿಲ್ ಈ ಬಾರಿ 1500 ರಿಂದ 2000 ರೂಪಾಯಿ ವರೆಗೆ ಬಂದಿದೆ.ಮಧ್ಯಮ ವರ್ಗದ ಜನರಿಗೆ ಶಾಪವಾಗಿ ಪರಿಣಮಿಸಿದೆ.800,1000 ಬರುತ್ತಿದ್ದ ಬಿಲ್ 3000 ದಿಂದ 5000 ರೂಪಾಯಿ ಬಂದಿದೆ. ಬಡವರು,ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ವಿದ್ಯುತ್ ಬಿಲ್ ಕಟ್ಟಲಾಗದೆ ಒದ್ದಾಡುವ ಪರಿಸ್ಥಿತಿ ಎದುರಾಗಿದೆ.ಸಾರ್ವಜನಿಕರು ಇದನ್ನು ವಿರೋಧಿಸಿತ್ತಿದ್ದರೂ ಸರ್ಕಾರ ಹಾಗೂ ಇಂಧನ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿವೆ.ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಹೆದರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿರುವುದು ಮೇಲ್ನೋಟಕ್ಕೆ ಸಮಂಜಸವಾದರೂ ಇದರಿಂದ ಪುರುಷರು ಪ್ರಯಾಣ ಮಾಡುವುದು ದುಸ್ತರವಾಗಿದೆ.ಬಸ್ ಗಳಲ್ಲಿ ಶೆ 50 ರಷ್ಟು ಮಾತ್ರ ಮಹಿಳೆಯರಿಗೆ ಸ್ಥಳವಕಾಶ ಕಲ್ಪಿಸಲಾಗಿದೆ.ಆದರೆ ಸರ್ಕಾರ ಮಾಡಿದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದ್ದರೂ ಸಾರಿಗೆ ಇಲಾಖೆ ಜಾಣ ಕುರುಡುನಂತೆ ವರ್ತಿಸುತ್ತಿದೆ.ಕೂಡಲೇ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನಸಾಮಾನ್ಯರನ್ನು ಲೂಟಿ ಮಾಡುವುದನ್ನು ಬಿಡಬೇಕು.ಇಲ್ಲದಿದ್ದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.