ಮೈಸೂರು: ಜೂ.07:- ಎಮ್ಮೆ, ಕೋಣಗಳನ್ನ ಕಡಿಯುವುದಾದರೆ ಗೋವುಗಳನ್ನ ಏಕೆ ಕಡಿಯಬಾರದು ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿದ ಎಂಎಲ್ಸಿ ಹೆಚ್.ವಿಶ್ವನಾಥ್ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ.
ಜನರ ಮನಸ್ಸಿಗೆ ನೋವಾಗದಂತೆ ನಿರ್ಧಾರ ಕೈಗೊಳ್ಳುತ್ತೇವೆಂದು ಸಿಎಂ ಹೇಳಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿಯವರು ಸುಮ್ಮನೆ ತಿರುಗಿ ಬೀಳುತ್ತಿದ್ದಾರೆ. ಸರ್ಕಾರದ ತೀರ್ಮಾನವೇ ನನ್ನ ತೀರ್ಮಾನವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಚಾರ. ಕೆಲವೊಂದಕ್ಕೆ ಷರತ್ತುಗಳನ್ನ ಹಾಕಲೇಬೇಕು.
ಯೋಜನೆಗಳನ್ನ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ. ಈಗಾಗಲೇ ಎಲ್ಲಾ ಯೋಜನೆಗಳನ್ನ ಜಾರಿಗೊಳಿಸಲಾಗಿದೆ ಎಂದರು.
ಕಾಂಗ್ರೆಸ್ ಕಚೇರಿಯಲ್ಲಿ ದೇವರಾಜ ಅರಸರ ಸ್ಮರಣೆ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಅರಸುರನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಹಿಂದುಳಿದ ಹಾಗೂ ಶೋಷಿತರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಅವರನ್ನು ಸಾಮಾಜಿಕವಾಗಿ ಮುನ್ನೆಲೆಗೆ ತಂದ ದೇವರಾಜ ಅರಸು ಅವರು ನಿಜವಾಗಿಯೂ ಸಾಮಾನ್ಯ ಜನರ ಅರಸರಾಗಿದ್ದರು. ಯಾವುದೇ ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲವಾಗಬೇಕಾದರೆ ರಾಜಕೀಯ ಅಧಿಕಾರ ಬಹಳ ಮುಖ್ಯ. ಇದನ್ನು ಮನಗಂಡಿದ್ದ ದೇವರಾಜ ಅರಸು ಅವರು ಸಣ್ಣಪುಟ್ಟ ಜನಾಂಗದವರಿಗೂ ರಾಜಕೀಯ ಅಧಿಕಾರ ನೀಡಿದರು ಎಂದು ಸ್ಮರಿಸಿದರು.
ಉಳುವವನಿಗೇ ಭೂಮಿ ಎಂಬ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಸುಮಾರು 21 ಲಕ್ಷ ಹೆಕ್ಟೇರ್ ಪ್ರದೇಶವನ್ನು ಬಡವರಿಗೆ ನೀಡಿದ್ದು ಐತಿಹಾಸಿಕ ಚರಿತ್ರೆ. ಕಾಂಗ್ರೆಸ್ ಪಕ್ಷದ ಇಂತಹ ಚಾರಿತ್ರಿಕ ತೀರ್ಮಾನವನ್ನು ಜನರ ಬಳಿ ಕೊಂಡೊಯ್ಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ, ಮಾನವೀಯತೆಗೆ ಮತ್ತೊಂದು ಹೆಸರೇ ದೇವರಾಜ ಅರಸು. ಬಡವರಿಗೆ, ದೀನದಲಿತರಿಗೆ ಸಹಾಯ ಮಾಡುವ ಸಂದರ್ಭ ಎದುರಾದಲ್ಲಿ ಹಿಂದೆ ಮುಂದೆ ಯೋಚಿಸದೆ ಸಹಾಯ ಹಸ್ತ ಚಾಚುತ್ತಿದ್ದರು. ಅವರ ಬಳಿ ಸಹಾಯ ಪಡೆದವರಲ್ಲಿ ನಾನೂ ಕೂಡ ಒಬ್ಬ ಎಂದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮಾತನಾಡಿ, ರಾಜ್ಯದ ಜನರು ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದ್ದಾರೆ. ಆದರೆ, ದೇವರಾಜ ಅರಸರು ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಹಾದಿಯಲ್ಲೇ ಸಿದ್ದರಾಮಯ್ಯ ಅವರು ಕೂಡ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಮೇಯರ್ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಎಂ.ಸಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಆರ್.ಸೋಮಸುಂದರ್, ಶಿವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್.ಗೌಡ, ಈಶ್ವರ ಚಕ್ಕಡಿ, ಲತಾ ಸಿದ್ದಶೆಟ್ಟಿ, ಅಬು ಅಹಮದ್, ಪಾರ್ಥಸಾರಥಿ, ಯೋಗೇಶ್ ಉಪ್ಪಾರ್, ಪ್ರಕಾಶ್ ಕುಂಬಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ, ಆರ್.ನಾಗೇಶ್, ಕೆ.ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.