
ರಾಯಚೂರು,ಮೇ.೦೫- ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಹೃದಯಭಾಗವಾದ ನಿಜಲಿಂಗಪ್ಪ ಕಾಲೋನಿಯಲ್ಲಿಂದು ಶಾಸಕರಾದ ಶಿವರಾಜ್ ಪಾಟೀಲರು ಭರ್ಜರಿ ಪ್ರಚಾರ ಕೈಗೊಂಡರು. ಎಟಿಮ್ ಸರ್ಕಲ್ ನಲ್ಲಿ ಶಾಸಕರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರವನ್ನು ಹಾಕಿ ಶಾಸಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಂತರ ಕಾಲೋನಿಯ ಮನೆ ಮನೆಗೆ ತೆರಳಿ ಮತ್ತೊಮ್ಮೆ ತಾವೆಲ್ಲರೂ ಕಮಲದ ಗುರುತಿಗೆ ಮತ ನೀಡುವ ಮೂಲಕ ಆರ್ಶೀವದಿಸುವಂತೆ ಕೋರಿದರು. ಈ ವೇಳೆ ಮಹಿಳೆಯರು ಆರತಿಯನ್ನು ಬೆಳಗುವ ಮೂಲಕ ಹರಸಿದರು.
ಈ ವೇಳೆ ಮಾತನಾಡಿದವರು ವಾಡ್೯ ನಂ. ೫ ನಿಜಲಿಂಗಪ್ಪ ಕಾಲೋನಿ ನನ್ನ ಮನೆ ಇದ್ದಂತೆ ಈ ಕಾಲೋನಿಯ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಈ ಬಡಾವಣೆಯನ್ನು ಮಾದರಿಯುತ ಬಡಾವಣೆಯನ್ನಾಗಿಸುವೆ ಎಂದರು. ಜನರು ತೋರಿಸುತ್ತಿರುವ ಪ್ರೀತಿಯನ್ನು ನೋಡಿದರೆ ನಾನು ಚುನಾವಣೆಯಲ್ಲಿ ಗೆದ್ದಷ್ಟೇ ಖುಷಿಯಾಗುತ್ತಿದ್ದೆ .ಈ ಹಿನ್ನೆಲೆಯಲ್ಲಿ ತಾವೆಲ್ಲರೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತೀರಾ ಎನ್ನುವ ವಿಶ್ವಾಸವಿದ್ದು, ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ತಮ್ಮ ಸೇವೆ ಮಾಡುವ ಸದಾವಕಾಶವನ್ನು ಕಲ್ಪಿಸಿ ನವರಾಯಚೂರಿನ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳು, ಪಕ್ಷದ ಪ್ರಮುಖ ಮುಖಂಡರುಗಳು, ಕಾರ್ಯಕರ್ತರು ಹಾಗೂ ವಾರ್ಡಿನ ಜನರು ಉಪಸ್ಥಿತರಿದ್ದರು.