ಜಗಳಕ್ಕೆ ಬೇಸತ್ತ ತಂದೆಯ ದೊಣ್ಣೆ ಏಟಿಗೆ ಮಗಳು ಬಲಿ

ಬೆಂಗಳೂರು,ಮಾ.16-ಪತಿಯ ಮನೆ ಬಿಟ್ಟು ತವರು ಮನೆ ಸೇರಿಕೊಂಡು ಎಲ್ಲರಿಗೂ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಂದೆಯೇ ಸ್ವತಃ ಮಗಳನ್ನು ದೊಣ್ಣೆಯಿಂದ ಕೊಲೆ ಮಾಡಿದ ದುರ್ಘಟನೆ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಧನಲಕ್ಷ್ಮಿ ಲೇಔಟ್ ನ ಆಶಾ (32) ಕೊಲೆಯಾದ ದುರ್ದೈವಿ.ಕೃತ್ಯ ನಡೆಸಿದ ಆಕೆಯ ತಂದೆ ರಮೇಶ್ (60)ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಮಾತುಕತೆ ಅಥವಾ ಕೌನ್ಸೆಲಿಂಗ್‌ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಒಂದು ಜೀವ ಸಾವನ್ನಪ್ಪಿದರೆ ಉಳಿದವರು ಜೈಲು ಪಾಲಾಗಬೇಕಾಗುತ್ತದೆ.  ಮೃತ ಆಶಾಳನ್ನು ಹಲವು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆ ಕೆಲವೇ ದಿನಗಳಲ್ಲಿ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ಸೇರಿಕೊಂಡಿದ್ದರು. ಹೆತ್ತ ಮಗಳ ಜೀವನ ಸರಿ ಮಾಡಲು ತಂದೆ-ತಾಯಿ ಎಷ್ಟೇ ಪ್ರಯತ್ನ ಮಾಡಿದರೂ ಆಕೆ ಮಾತ್ರ ಯಾರ ಮಾತನ್ನೂ ಕೇಳದೆ ಹಠ ಮಾಡುತ್ತಿದ್ದಳು.
ಜೊತೆಗೆ, ಮನೆಯಲ್ಲಿ ಮದುವೆಯಾಗಬೇಕಿದ್ದ ಇನ್ನೊಬ್ಬ ತಂಗಿ ಹಾಗೂ ತಂದೆ, ತಾಯಿಗೆ ಈಕೆ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಳು. ಇದರಿಂದ ಆಗಿಂದಾಗ್ಗೆ ಮನೆರಯಲ್ಲಿ ಗಲಾಟೆಯೂ ನಡೆಯುತ್ತಿತ್ತು.
ದೊಣ್ಣೆಯಿಂದ ಹೊಡೆದ: 
ಇನ್ನು ತಂದೆ, ತಾಯಿಯೊಂದಿಗೆ ಆಶಾ ನಿನ್ನೆಯೂ ಕೂಡ ಜಗಳ ಆರಂಭಿಸಿದ್ದಾಲೆ. ಆದರೆ, ಪ್ರತಿನಿತ್ಯ ಹಿರಿಯ ಮಗಳ ಕಿರುಕುಳದಿಂದ ಬೇಸತ್ತಿದ್ದ ತಂದೆ ರಮೇಶ್‌ ಜಗಳದ ವೇಳೆ ದೊಣ್ಣೆ ತೆಗೆದುಕೊಂಡು ಆಕೆಯ ತಲೆಗೆ ಹೊಡೆದಿದ್ದಾನೆ. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ರಕ್ತಸ್ರಾವ ಉಂಟಾಗಿದೆ. ಇನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮೊದಲೇ ಹಿರಿಮಗಳು ಆಶಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ತಂದೆ ರಮೇಶ್‌ನನ್ನು ಬಂಧಿಸಿದ್ದಾರೆ.