
ಬಳ್ಳಾರಿ,ಮಾ.14: ಮಕ್ಕಳು ಮತ್ತು ಹದಿಹರೆಯದವರು ಜಂತುಹುಳು ನಿವಾರಕ ಮಾತ್ರೆಯನ್ನು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಮಹಾನಗರ ಪಾಲಿಕೆ ಸದಸ್ಯ ಹನುಮಂತಪ್ಪ ಗುಡಿಗಂಟೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಪಾರ್ವತಿನಗರ ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಜಂತು ಹುಳು ನಿವಾರಣಾ ಮಾತ್ರೆ (ಆಲ್ಬಂಡೋಜೋಲ್) ಮಾತ್ರೆಗಳನ್ನು ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ ರಕ್ತಹೀನತೆಯನ್ನು ತಡೆಗಟ್ಟಲು ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಮಾತ್ರೆಯನ್ನು ಚೀಪಿಸುವುದರ ಮೂಲಕ ಸೇವನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಅನೀಲ್ಕುಮಾರ್ ಅವರು ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವು ಇದೇ ಮಾ.25ರವರೆಗೆ ಹಮ್ಮಿಕೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿನ ಮನೆ ಮನೆಗೆ ಭೇಟಿ ನೀಡುವ ಮೂಲಕ 6 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಜಂತು ನಿವಾರಣೆಯಿಂದ ಮಕ್ಕಳಿಗೆ ಅನುಕೂಲಗಳು: ಪರೋಕ್ಷ ಅನುಕೂಲಗಳು-ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆ. ಅಪರೋಕ್ಷ ಅನುಕೂಲಗಳು-ರೋಗ ನಿರೋಧಕ ಶಕ್ತಿಯ ಸುಧಾರಣೆ, ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ, ಕಾರ್ಯತತ್ಪರತೆ ಮತ್ತು ವೃತ್ತಿ ಆಧಾರಿತ ಅವಕಾಶಗಳು ಲಭಿಸುತ್ತವೆ, ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ.
ಮಗು ಖಾಯಿಲೆ ಬಳಲದೇ ಇದ್ದರೂ ಜಂತು ನಿವಾರಕ ಮಾತ್ರೆಯನ್ನು ನುಂಗಿಸಿಲು ಕಾರಣವೆಂದರೆ?-ಜಂತು ಹುಳುಗಳ ಬಾಧೆಯಿಂದ ಸಮುದಾಯದಲ್ಲಿ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಾಗಿ. ಕೆಲವು ಬಾರಿ ಮಕ್ಕಳಲ್ಲಿಯ ಜಂತುಹುಳುವಿನ ತೊಂದರೆಯ ಲಕ್ಷಣಗಳು ಕಾಣದಿರಬಹುದು. ಆದ್ದರಿಂದ ಮಗುವಿನ ಭವಿಷ್ಯದ ಆರೋಗ್ಯ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಜಂತುಹುಳು ನಿವಾರಕ ಮಾತ್ರೆ ಮಕ್ಕಳು ಮತ್ತು ವಯಸ್ಕರರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ. ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ.
ಏನಿದು ಅಲ್ಬೆಂಡಾಜೋಲ್ ಮಾತ್ರೆ: 1-2 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧಮಾತ್ರೆಯನ್ನು ಮುರಿದು ಎರಡು ಚಮಚಗಳ ನಡುವೆ ಪುಡಿಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 2-3 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಎರಡು ಚಮಚಗಳ ನಡುವೆ ಪುಡಿ ಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 3-19 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ನೀಡಬೇಕು ಹಾಗೂ ಗಂಟಲಲ್ಲಿ ಸಿಲುಕಿಸಿಕೊಳ್ಳುವುದನ್ನು ತಪ್ಪಿಸಲು ಜಂತು ನಿವಾರಕ ಮಾತ್ರೆಯನ್ನು ಚೀಪಿಸಬೇಕು.
ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಗುರುನಾಥ ಬಿ.ಚೌವ್ಹಾಣ್ ಅವರು ಮಾತನಾಡಿದರು.
ಶಾಲೆಯ ಮುಖ್ಯಗುರುಗಳಾದ ನೀಮಾ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕುರಿತಾಗಿ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದರು ಮತ್ತು ಸಾಂಕೇತಿಕವಾಗಿ 5 ಮಕ್ಕಳಿಗೆ ಮಾತ್ರೆಯನ್ನು ಪುಡಿಮಾಡಿ ಪ್ರಾಶನ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಡಾ.ಸುಧಾರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್.ಹೆಚ್ ದಾಸಪ್ಪನವರ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಎವೆಡೆನ್ಸ್ ಆಕ್ಷನ್ನ ಷಡಾಕ್ಷರಿ.ಟಿ, ಸಹ ಶಿಕ್ಷಕಿ ಗೌರಮ್ಮ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.