
ಔರಾದ :ಫೆ.27: ಬೇಡ ಜಂಗಮರಿಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಮೇಷ ಎಣಿಸುತ್ತಿದೆ. ರಾಜ್ಯದ ಸಮಸ್ತ ಬೇಡ ಜಂಗಮರಿಗೆ ಸಂವಿಧಾನಾತ್ಮಕ ಸೌಲಭ್ಯ ಸಿಗುವವರೆಗೆ ಜಂಗಮರ ಹೋರಾಟ ನಿತ್ಯ ನಿರಂತರವಾಗಿರುತ್ತದೆ ಎಂದು ಹೋರಾಟ ನಡೆಸಲಾಗುವುದು’ ಎಂದು ಮೆಹಕರ ಕಟ್ಟಿಮನಿ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಂಗಮ ವಿರಾಟ ಸಮಾವೇಶದಲ್ಲಿ ಮಾತನಾಡಿದ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯ ಪ್ರತಿಪಾದನ ಹೋರಾಟ ನಡೆಯುತ್ತಿದೆ. ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ 242 ದಿನ ಪೂರೈಸಿದೆ. ಆದರೂ ಸರ್ಕಾರ ಈ ಕುರಿತು ಕ್ರಮ ಕೈಗೊಂಡಿಲ್ಲ, ಇದು ಹೀಗೆ ಮುಂದುವರೆದರೆ ಜಂಗಮರು ಯಾವ ಭಿಕ್ಷೆ ಕೇಳುತ್ತಿಲ್ಲ ಸಂವಿಧಾನಾತ್ಮಕವಾಗಿ ಸಿಗುವ ಹಕ್ಕು ಕೇಳುತ್ತಿದ್ದೇವೆ ಬೇಡಿ ಸಿಗದಿದ್ದಲ್ಲಿ ಕಸಿದು ಪಡೆಯಬೇಕಾಗುತ್ತದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲಬರ್ಗಾ ಬೋರಾಳ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಜಂಗಮರಿಗೆ ಹಲವು ದಶಕಗಳಿಂದ ಸಾಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರವನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಬೇಡ ಜಂಗಮರು ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿಯುವಂತಾಗಿದೆ, ಜಂಗಮರ ಶಾಪ ವಿನಾಶಕ್ಕೆ ಕಾರಣವಾಗುತ್ತದೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಮಾತನಾಡಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ತಡೆಯಲು ಕಾಣದ ಕೈಗಳು ಹುನ್ನಾರ ನಡೆಸಿವೆ, ನಮ್ಮವರೇ ನಮಗೆ ವೈರಿ ಎನ್ನುವಂತೆ ನಮ್ಮ ಸಮಾಜದ ಶಾಸಕರು ಜಂಗಮ ಸಮಾಜದ ಬಗ್ಗೆ ಧ್ವನಿ ಎತ್ತದೆ ಇರುವುದು ವಿಷಾದನೀಯ, ನಾನು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿದ್ದೇನೆ ಔರಾದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ನಮ್ಮ ಎಲ್ಲ ಸಮಾಜದ ಆಶೀರ್ವಾದ ನನ್ನ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಹೆಡಗಾಪೂರ ಶಿವಲಿಂಗ ಶಿವಾಚಾರ್ಯರು, ಠಾಣಾಕುಶನೂರ ಸಿದ್ಧಲಿಂಗ ಸ್ವಾಮೀಜಿ, ಗುಡಪಳ್ಳಿಯ ಚಂದ್ರಶೇಖರ ಶಿವಾಚಾರ್ಯರು, ಹಾವಗಿಲಿಂಗ ಶಿವಾಚಾರ್ಯರು, ಬಸವಲಿಂಗ ಶಿವಾಚಾರ್ಯರು, ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ರೇವಣಸಿದ್ದ ವಿಶ್ವನಾಥ ಸ್ವಾಮಿ, ಕಾರ್ತಿಕ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಗುಂಡಯ್ಯ ಸ್ವಾಮಿ, ನೆಹರೂ ಸ್ವಾಮಿ, ಶಿವಕಾಂತ ಸ್ವಾಮಿ, ದಯಾನಂದ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಗಂಗಾಧರ ಸ್ವಾಮಿ, ದಯಾನಂದ ವಡ್ಡೆ, ಮನೋಜ ಸ್ವಾಮಿ ಸಚ್ಚಿದಾನಂದ ಸ್ವಾಮಿ, ಮಹೇಶ ಸ್ವಾಮಿ ಅಮರ ಸ್ವಾಮಿ ಸೇರಿದಂತೆ ಜಂಗಮ ಬಾಂಧವರು ಪಾಲ್ಗೊಂಡಿದ್ದರು.
ಗಮನ ಸೆಳೆದ ಜಂಗಮರ ಕುರುಹು ಪ್ರದರ್ಶನ :-
ಪಟ್ಟಣದ ಅಮರೇಶ್ವರ ದೇಗುಲದಿಂದ ತೆರೆದ ಸಾರೋಟಿನಲ್ಲಿ ಹೊರಟ ಮಠಾಧೀಶರ ಮೆರವಣಿಗೆಯಲ್ಲಿ ಜಂಗಮರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಜೈ ಜಂಗಮ ಜೈ ಜೈ ಜಂಗಮ ಎದ್ದು ಕೂಗುತ್ತಾ ತನ್ನ ಸಮಾಜದ ಕುರುಹುಗಳಾದ ಜೋಳಿಗೆ, ಗಂಟೆ, ಶಂಖನಾದ, ಕಾಶಿ ಕಟ್ಟಿ ಓದುವುದು ನೋಡುಗರ ಗಮನ ಸೆಳೆಯಿತು.
ವಿರಾಟ ಜಂಗಮ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು
- ಕರ್ನಾಟದಲ್ಲಿ ಶೇ 8% ಜಂಗಮ ಸಮಾಜದವರಿದ್ದಾರೆ. ಹೀಗಾಗಿ ಬೀದರ ಜಿಲ್ಲೆಯ ಔರಾದ ಮಿಸಲು ಕ್ಷೇತ್ರದಿಂದ ಜಂಗಮ ಸಮಾಜದ ನಾಯಕರಾದ ಶ್ರೀ ರವೀಂದ್ರ ಸ್ವಾಮಿ ಅವರಿಗೆ ಬಿಜೆಪಿ ಯಿಂದ ಟಿಕೇಟ ನೀಡಬೇಕು.
- ರಾಜ್ಯದಲ್ಲಿ ಎಲ್ಲಾ ಸಣ್ಣ ಪುಟ್ಟ ಸಮಾಜದವರಿಗೆ ನಿಗಮ ಮಂಡಳಿ ಸ್ಥಾಪಿಸಿದಂತೆ ಜಂಗಮ ಸಮಾಜಕ್ಕೂ ಸಹ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಅದಕ್ಕೆ ಕನಿಷ್ಠ 100 ಕೋಟಿ ಅನುದಾನ ಮೀಸಲಿಡಬೇಕು.
- ಜಂಗಮ ಸಮಾಜದವರಿಗೂ ಪ್ರತ್ಯೇಕವಾಗಿ ಸಮುದಾಯ ಭವನ & ಕಲ್ಯಾಣ ಮಂಟಪ ನಿರ್ಮಿಸಬೇಕು.
- ಕಳೆದ ನಾಲೈದು ತಿಂಗಳಿನಿಂದ ಜಂಗಮ ಸಮಾಜದ ಶಕ್ತಿ ಶ್ರೀ ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಸತ್ಯ ಪ್ರತಿಪಾದನೆ ಹೋರಾಟ ನಡೆಯುತ್ತಿದೆ. ಹೀಗಾಗಿ ಜಂಗಮ ಸಮಾಜ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು.
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದಿಕ ಪಾಠಶಾಲೆಗಳನ್ನು ಹಾಗೂ ಸಂಸ್ಕಾರ ಕೇಂದ್ರಗಳನ್ನು ತೇರೆಯಬೇಕು.
6.ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರವ ಜಂಗಮ ಸಮಾಜದ ಅರ್ಚಕರಿಗೆ ಹಾಗೂ ಪ್ರಧಾನ ಅರ್ಚಕರಿಗೆ ಸರ್ಕಾರ ತಿಂಗಳಿಗೆ ಕನಿಷ್ಠ ರೂ.5000/- ಗಳು ಮಾಶಾಸನ ನೀಡಬೇಕು.