
ಬಳ್ಳಾರಿ,ಮಾ.31: ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಯುತವಾಗಿ ನಡೆಸಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕರಿಸುವ ಮೂಲಕ ಈ ವೇಳೆ ಹಣದ ದುರುಪಯೋಗ ಮತ್ತು ಸಾರ್ವಜನಿಕರಿಗೆ ಆಸೆ, ಆಮಿಷಗಳಿಗೆ ಒಳಪಡಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಗೆ ಲಂಚ ನೀಡಬಾರದು ಅಥವಾ ಹಣವನ್ನು ಬಳಸಿ ಲಂಚ ನೀಡಲು ಪ್ರಯತ್ನಿಸಬಾರದು. ಸರಕುಗಳು, ಬೆಲೆಬಾಳುವ ವಸ್ತುಗಳು, ಉಡುಗೊರೆಗಳು, ಮದ್ಯ, ಇಂಧನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಅಥವಾ ಶೇಖರಣೆ ಮಾಡುವಂತಿಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಸರ್ವೇಲೆನ್ಸ್ ತಂಡಗಳು, ಚೆಕ್ ಪೋಸ್ಟ್ ಹಾಗೂ ವೀಡಿಯೊ ಕಣ್ಗಾವಲು ತಂಡಗಳು, ಫ್ಲೈಯಿಂಗ್ ಸ್ಕ್ವ್ಯಾಡ್ಗಳು ಕಾರ್ಯನಿರ್ವಹಿಸುತ್ತಿವೆ. ವಿವರಣಾತ್ಮಕ ಮತ್ತು ದೃಢೀಕರಿಸುವ ದಾಖಲೆಗಳಿಲ್ಲದೆ ರೂ.50ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ.
ಚುನಾವಣೆಯ ನಿಯಾಮವಳಿ ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗಿಸುತ್ತದೆ ಎಂದು
ಅವರು ಆದೇಶದಲ್ಲಿ ತಿಳಿಸಿದ್ದಾರೆ.