
ಮೈಸೂರು,ಏ.26:- ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿರ್ವಹಣೆ ಹಾಗೂ ಚುನಾವಣೆ ಖರ್ಚು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕೆಂದು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾದ ದಿಲ್ರಾಜ್ ಸಿಂಗ್ ಸೂಚನೆ ನೀಡಿದರು. ಚುನಾವಣೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಕಮಲಾಬಾಯಿ ಹಾಗೂ ಸಹಾಯಕಾ ಚುನಾವಣಾಧಿಕಾರಿ ಬಿಎನ್ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀಕ್ಷಕರು ಮತದಾನ ಪ್ರಕ್ರಿಯೆ ಹಾಗೂ ವೆಚ್ಚದ ನಿರ್ವಹಣೆಯ ಮಾಹಿತಿ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದು ಅಭ್ಯರ್ಥಿಗಳ ಕರ ಪತ್ರದ ವೆಚ್ಚದ ಕುರಿತು ತಿಳಿದುಕೊಳ್ಳಬೇಕು. ಅಭ್ಯರ್ಥಿಗಳಿಗೆ ನೀಡುವ 3 ರಿಜಿಸ್ಟರ್ಗಳನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ್ದು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಹಾಗಾಗಿ ಪಕ್ಷಗಳು ಅಥವಾ ಅಭ್ಯರ್ಥಿ ಸಾಮಾನ್ಯ ಮತದಾರರನ್ನು ವಾಹನದಲ್ಲಿ ಮತಗಟ್ಟೆಗೆ ಕರೆತಂದರೆ ಆ ವಾಹನ ಜಪ್ತಿ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಚುನಾವಣಾ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.