ಹುಬ್ಬಳ್ಳಿ, ಮಾ26: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರವೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ಸಮಯದಲ್ಲಿಯೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ, ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ನಿರ್ವಹಣೆ ಕುರಿತಂತೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಒಳ ಮೀಸಲಾತಿ ವಿಷಯ ಕುರಿತಂತೆ ಪ್ರತಿಕ್ರಯಿಸುತ್ತ, ಈ ವಿಚಾರ ಮೂವತ್ತು ವರ್ಷಗಳಿಂದಲೂ ಇತ್ತ, ಕಾಂಗ್ರೆಸ್ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಕೊನೆಯ ಘಳಿಗೆಯಲ್ಲಿ ಕೈಕೊಟ್ಟಿತ್ತು ಎಂದು ಅವರು ಹರಿಹಾಯ್ದರು.
ನಮಗೆ ಬದ್ಧತೆ ಇದೆ, ಮೀಸಲಾತಿ ಕುರಿತು ಅಧ್ಯಯನ ಮಾಡಿ ಸಚಿವ ಸಂಪುಟ ಉಪ ಸಮಿತಿ ರಚಿಸಿ, ಮಾಡಬೇಕಾದುದನ್ನು ಕಾನೂನು ಪ್ರಕಾರ ಮಾಡಿದ್ದೇವೆ ಎಂದು ಅವರು ನುಡಿದರು.
ಕಾಂಗ್ರೆಸ್ ನವರು ಯಾವಾಗಲೂ ಎಸ್.ಸಿ, ಎಸ್.ಟಿ ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದರು. ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿ ಈ ಚುನಾವಣೆಯಲ್ಲಿಯೂ ಯಾಮಾರಿಸಬಹುದೆಂದುಕೊಂಡಿದ್ದರು. ನಾವು ಸಾಮಾಜಿಕ, ಅಭಿವೃದ್ಧಿ ವಿಚಾರದಲ್ಲಿ ಸಂಘ ಸಂಸ್ಥೆಗಳ ಜೊತೆಗೆ ಚರ್ಚಿಸಿ ಹಲವಾರು ತೀರ್ಮಾನ ಮಾಡಿದ್ದೇವೆ. ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನಮ್ಮ ಬದ್ಧತೆ ಕಾರಣವಾಗಿದೆ ಎಂದು ಸಿ.ಎಂ. ಹೇಳಿದರು.
ಆ ಜನಾಂಗಕ್ಕೆ ನ್ಯಾಯ ಕೊಡಿಸುವರೆಗೋ ಮಿಶ್ರಮಿಸಲ್ಲ, ಆದರೇ ಜೇನು ಗೂಡಿಗೆ ಕೈ ಹಾಕದೇ ಇದ್ದಲ್ಲಿ ಜೇನು ಸಿಗುವುದಿಲ್ಲ ಎಂದು ಗೊತ್ತಿತ್ತು. ನಾನು ಜೇನು ಗೂಡಿಗೆ ಕೈ ಹಾಕಿದ್ದೇನೆ.ಜೇನು ನೊಣದಿಂದ ಕಚ್ಚಿಸಿಕೊಂಡರು ಪರವಾಗಿಲ್ಲ. ಆ ಸಮುದಾಯಕ್ಕೆ ಜೇನಿನ ಹನಿಯನ್ನು ಕೊಡಿಸಲು ಸಿದ್ಧ ಅಂತ ಹೇಳಿದ್ದೆ ಈಗ ಅದನ್ನು ನಾನು ಮಾಡಿದ್ದೇನೆ ಎಂದ ಅವರು ಜೇಣುನೊಣಗಳಿಂದ ಕಚ್ಚಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ ಆದರೇ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಖಂಡಿಸಿದರು.
ಅಲ್ಪಸಂಖ್ಯಾತರನ್ನು ಇಡಬ್ಲ್ಯೂಎಸ್ಗೆ ಸೇರ್ಪಡೆ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಮೊದಲು ಶೇ 4 ಮೀಸಲಾತಿ ಇತ್ತು, ಇದೀಗ ಶೇ 10 ರಷ್ಟು ಮೀಸಲಾತಿ ಇರುವ ಕಡೆ ಹಾಕಿದ್ದೇವೆ. ಇದು ಹೇಗೆ ಅನ್ಯಾಯವಾಗುತ್ತದೆ? ಅಲ್ಪಸಂಖ್ಯಾತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಮಹದಾಯಿ: ಮಹದಾಯಿ ಯೋಜನೆ ಕಾಮಗಾರಿ ಆರಂಭಕ್ಕೆ ಚುನಾವಣಾ ಪ್ರಕ್ರಿಯೆಯಿಂದ ತೊಡಕಾಗುವುದಿಲ್ಲ. ನೀತಿ ಸಂಹಿತೆ ಜಾರಿಯಾದರೂ ಸಹ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅಷ್ಟರೊಳಗಾಗಿ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಗೋ ವಿಶ್ವಾಸವಿದೆ ಎಂಬ ಭರವಸೆಯನ್ನು ಅವರು ಭರವಸೆ ವ್ಯಕ್ತಪಡಿಸಿದರು.