ಚುನಾವಣಾ ಪ್ರಚಾರದ ಅನುಮತಿಗಾಗಿ ಸುವಿಧಾ ತಂತ್ರಾಂಶ ಆನ್‍ಲೈನ್ ಬಳಸಲು ಸೂಚನೆ


ಬಳ್ಳಾರಿ,ಏ.6: ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು ಚುನಾವಣಾ ಆಯೋಗವು ಸುವಿಧಾ ತಂತ್ರಾಂಶದ ಆನ್‍ಲೈನ್ ಅಪ್ಲೀಕೇಶನ್ ನೀಡಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು.
ಅವರು ಬುಧವಾರ ನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ C-Vigil  ಮೂಲಕ ಪ್ರಕರಣಗಳನ್ನು ದಾಖಲಿಸುವ ಕುರಿತು ಹಾಗೂ ಸುವಿಧಾ ಅಪ್ಲಿಕೇಶನ್ ಮುಖಾಂತರ ಪರವಾನಿಗೆ ಪಡೆಯುವ ಕುರಿತು ಮತ್ತು ಆನ್‍ಲೈನ್ ಅಪ್ಲಿಕೇಶನ್ ಸಲ್ಲಿಸುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಿಮಿತ್ತ ಸಾರ್ವಜನಿಕರಿಗೆ ಆಸೆ, ಆಮಿಷಕ್ಕೆ ಒಳಪಡಿಸುವುದು ಮತ್ತು ಇತರೆ ಉಡುಗೋರೆಗಳನ್ನು ಹಂಚುವುದನ್ನು ಕಂಡುಬಂದಲ್ಲಿ ಸಾರ್ವಜನಿಕರು ಸಿ-ವಿಜಲ್ ಆಪ್ ಮೂಲಕ ಫೋಟೊ, ವೀಡಿಯೋ ಮತ್ತು ಆಡಿಯೋ ಸೆರೆಹಿಡಿದು ಕಳುಹಿಸಿದಲ್ಲಿ ಆಯಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
  ಸುವಿಧಾ ತಂತ್ರಾಂಶದಲ್ಲಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜಂಟ್, ಕಾರ್ಯಕರ್ತ ಅಥವಾ ಇತರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಯನ್ನು ಸಂಬಂದಿಸಿದ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡುತ್ತಾರೆ ಎಂದರು.
  ಚುನಾವಣಾ ಸಭೆ, ರ್ಯಾಲಿ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೆ (ಗೂಗಲ್ ಪ್ಲೇಸ್ಟೋರ್ ಇಸಿಐದಿಂದ SUVIDHA online Application)  ಸುವಿಧಾದಲ್ಲಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬಹುದು ಎಂದು ತಿಳಿಸಿದರು.
   ಕಡಿಮೆ ಅವಧಿಯಲ್ಲಿ ಆಪ್‍ಲೈನ್ ಅರ್ಜಿ ಸಲ್ಲಿಸಿ, ಅವಸರ, ಒತ್ತಡ ಮಾಡುವ ಬದಲು ಸುವಿಧಾ ಬಳಸಿ ಆನ್‍ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು ಮತ್ತು ಅನುಮತಿ ಪತ್ರದ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಅಪರ ವಿಜ್ಞಾನ ಸೂಚ್ಯಾಂಕ ಅಧಿಕಾರಿ ವೆಂಕಟರಮಣ, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಸಿಬ್ಬಂದಿ ಹಾಜರಿದ್ದರು.