
ರಾಮದುರ್ಗ,ಏ.17 ಚುನಾವಣಾ ಕರ್ತವ್ಯ ಅತಿ ಮಹತ್ವದ ಕೆಲಸವಾಗಿದ್ದು ಯಾವದೇ ಅಡಚಣೆಯಾಗದಂತೆ ಕೆಲಸ ನಿರ್ವಹಿಸಲು ಸರಿಯಾದ ತರಬೇತಿ ಅಗತ್ಯವೆಂದು ಮನಗಂಡು ತರಬೇತಿ ನೀಡಲಾಗುತ್ತದೆ ಎಲ್ಲರೂ ಸರಿಯಾಗಿ ತಿಳಿದುಕೊಂಡು ಕಾರ್ಯ ಮಾಡಬೇಕು ಎಂದು ಚುನಾವಣಾಧಿಕಾರಿ ಕಾಂತರಾಜು ಹೇಳಿದರು.
ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಪಟ್ಟಣದ ಈರಮ ಶಿ. ಯಾದವಾಡ ಸಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ 637 ಜನರಿಗೆ ಇದರಲ್ಲಿ ಮತಗಟ್ಟೆ ಅಧಿಕಾರಿಯಾಗಿ 325 ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಯಾಗಿ 312 ಜನರಿಗೆ ಮೊದಲ ತರಬೇತಿ ನಂತರ ಮತಯಂತ್ರಗಳ ಬಳಕೆ ಕುರಿತು 16 ಮುಖ್ಯತರಬೇತಿದಾರರು ತರಬೇತಿ ನೀಡಿದರು.
ರಾಮದುರ್ಗ ವಿಧಾನಸಭಾ ಚುನಾವಣಾಧಿಕಾರಿ, ಕಾಂತಾರಾಜ ಕೆ.ಜೆ ಮತ್ತು ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ, ಬಸವರಾಜ ನಾಗರಾಳ ತರಬೇತಿಯ ಉಸ್ತುವಾರಿ ನೋಡಿಕೊಂಡರು.