ಚುನಾವಣಾ ಅಕ್ರಮ ಫೋಟೋ ಅಪ್‌ಲೋಡ್ ಮಾಡಿದರೆ ಕ್ರಮ

ಬೆಂಗಳೂರು, ಏ.೧-ಚುನಾವಣೆ ಅಕ್ರಮ ಹಾಗೂ ನಿಯಮ ಉಲ್ಲಂಘಿಸುವುದು ಕಂಡುಬಂದ ಕೂಡಲೆ ಫೋಟೊ ಅಥವಾ ವೀಡಿಯೋವನ್ನು ಅಪ್ಲೋಡ್ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ನಿಮ್ಮ-ನಿಮ್ಮ ಯಲಹಂಕ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳೊಂದಿಗೆ ಇಂದು ನಡೆದ ಸಂವಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡುವ ಸಲುವಾಗಿ ಸಿ-ವಿಜಿಲ್ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ನಿಯಮ ಉಲ್ಲಂಘಿಸುವುದು ಕಂಡುಬಂದ ಕೂಡಲೆ ಫೋಟೊ ಅಥವಾ ವೀಡಿಯೋವನ್ನು ಅಪ್ಲೋಡ್ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಅರ್ಪಾಟ್ಮೆಂಟ್ ಗಳಲ್ಲಿ ಮತದಾನ ಮಾಡುವ ಎಲ್ಲರಿಗೂ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ ತಪ್ಪದೆ ಮತದಾನ ಮಾಡಲು ತಿಳುವಳಿಕೆ ನೀಡಿ. ಚುನಾವಾಣಾ ಆಯೋಗದಿಂದ ಮಾಡಿರುವಂತಹ ಸೌಲಭ್ಯಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವ ಮೂಲಕ ಈ ಬಾರಿ ನಗರದಲ್ಲಿ ಹೆಚ್ಚು ಮತದಾನವಾಗಲು ಕೈಜೋಡಿಸಲು ತಿಳಿಸಿದರು.
ನಗರದಲ್ಲಿ ೯೫,೧೩,೮೩೦ ಲಕ್ಷ ಮತದಾರರಿದ್ದು, ೮,೬೧೫ ಮತಗಟ್ಟೆಗಳು ಬರಲಿವೆ. ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮತಗಟ್ಟೆಯ ಸಂಖ್ಯೆ ಹಾಕಿದರೆ ಸಾಕು ಎಷ್ಟು ಮಂದಿ ಸರತಿ ಸಾಲಿನಲ್ಲಿದ್ದಾರೆ ಎಂಬ ಮಾಹಿತಿ ಲಬ್ಯವಾಗಲಿದೆ. ಜೊತೆಗೆ ಮತಗಟ್ಟೆಯ ಬಳಿಯ ಪಾರ್ಕಿಂಗ್ ನಲ್ಲಿ ಎಷ್ಟು ವಾಹನಗಳು ಇವೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿವೆ ಎಂದು ಹೇಳಿದರು.
ಬೂತ್ ಮಟ್ಟದ ಅಧಿಕಾರಿಗಳ ಭಾವಚಿತ್ರವುಳ್ಳ ಸಂಪೂರ್ಣ ವಿವರದ ಮಾಹಿತಿಯಲ್ಲಿ ಪಾಲಿಕೆಯ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಅವರಿಗೆ ಕರೆಮಾಡಿ ಅಗತ್ಯ ಮಾಹಿತಿ ಪಡೆಯಬಹುದು. ಜೊತೆಗೆ ಮತಗಟ್ಟೆಗಳ ಬಳಿ ತೆರಳಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ವಿ.ಹೆಚ್.ಎ: ಬಿಬಿಎಂಪಿ ವ್ಯಾಪ್ತಿಯ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವವರು ಕೂಡಲೆ ವಿ.ಹೆಚ್.ಎ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನಿಮ್ಮ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿದರೆ ಸಾಕು ನಿಮ್ಮ ಸಂಪೂರ್ಣ ವಿವರದ ಜೊತೆಗೆ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.
ಸೌಲಭ್ಯಗಳ ವ್ಯವಸ್ಥೆ:ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಶೌಚಾಲಯ, ಕುಡಿಯುವ ನೀರು, ಚೇರ್ ಗಳು, ಪ್ಯಾನ್, ವಿದ್ಯುತ್ ವ್ಯವಸ್ಥೆ, ವಿಕಲಚೇತನರಿಗಾಗಿ ರ?ಯಾಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳ ಬಳಿ ಮತದಾರರಿಗೆ ಬಿಸಿಲು ಬೀಳದಂತೆ ಪೆಂಡಾಲ್ ವ್ಯವಸ್ಥೆ, ಸರತಿ ಸಾಲು ಕೂಡಾ ವ್ಯವಸ್ಥಿತವಾಗಿ ಇರುವಂತೆ ಮಾಡಲು ಕೂಡಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.