ಚಿರತೆ ಪ್ರತ್ಯಕ್ಷ ರೈತರ ಆತಂಕ

ತುಮಕೂರು, ಆ. ೨೭- ತೋಟದ ಸಾಲುಗಳಲ್ಲಿ ಚಿರತೆಯೊಂದು ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತರಬೇನಹಳ್ಳಿ ತೋಟದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ.
ಗ್ರಾಮದ ಷಡಕ್ಷರಿ ಮತ್ತಿತರರ ತೋಟಗಳಲ್ಲಿ ಚಿರತೆ ಓಡಾಡುತ್ತಿದೆ. ತೋಟದ ಮನೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಚಿರತೆ ಚಲನವಲನದ ದೃಶ್ಯ ಸೆರೆಯಾಗಿದೆ. ತೋಟದ ಕೆಲಸಗಾರರು ಸಹ ಚಿರತೆ ಓಡಾಟವನ್ನು ವೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ತೋಟದ ಸಾಲಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಈ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಚಿರತೆ ಸೆರೆ ಹಿಡಿಯಲು ಈಗಾಗಲೇ ಪರಿಶೀಲನೆ ನಡೆಸಿ ಬೋನು ಇಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.